ಬೆಂಗಳೂರು: ಸೈಬರ್ ಅಪರಾಧಗಳು ಮತ್ತು ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಸಮರದಲ್ಲಿ ಯಾವುದೇ ರೀತಿಯ ರಾಜಿ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯೋಜಿಸಿರುವ ‘ಸೈಬರ್ ಸುರಕ್ಷತೆ ಅಭಿಯಾನಕ್ಕೆ’ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಅಪರಾಧಿಗಳನ್ನು ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ ಮತ್ತು ಅದರ ವಿರುದ್ಧ ಸಮರ ಸಾರಲು ಇದು ಸಕಾಲವಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಸಿಐಆರ್ ಸಂಖ್ಯೆ ವ್ಯವಸ್ಥೆಯನ್ನು ಪರಿಚಯಿಸಿದೆ. ಇಡೀ ದೇಶದಲ್ಲಿ ಇದೇ ಮೊದಲನೆಯದಾಗಿದೆ, ಡಿಜಿಟಲ್ ಸಾಕ್ಷರತೆಯಿಂದ ಸೈಬರ್ ಅಪರಾಧಗಳನ್ನು ತಡೆಯಬಹುದು. ಸೈಬರ್ ಅಪರಾಧಿಗಳು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದಾಗ ಖಾತೆದಾರರ ಮೊಬೈಲ್ ಸಂಖ್ಯೆಗೆ ಸಿಐಆರ್ ಸಂಖ್ಯೆ ಬರುತ್ತದೆ. ತಕ್ಷಣವೇ ಅದರ ಮಾಹಿತಿಯೊಂದಿಗೆ ದೂರು ನೀಡಿದರೆ ಹಣ ಲಪಟಾಯಿಸಿದವರಿಗೆ ಸಂಬಂಧಿಸಿದ ಎಲ್ಲ ಖಾತೆಗಳನ್ನೂ ಸ್ಥಗಿತಗೊಳಿಸಲು ಸಾಧ್ಯವಿದೆ. ಅಂಥ ವ್ಯವಸ್ಥೆಯನ್ನು ಕರ್ನಾಟಕವು ದೇಶದಲ್ಲೇ ಮೊದಲ ಬಾರಿಗೆ ಪರಿಚಯಿಸಿದೆ. ರಾಜ್ಯದ ಈ ನಡೆಗೆ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಾದಕ ವಸ್ತು ಪೂರೈಕೆ ಜಾಲ, ಮಾನವ ಕಳ್ಳಸಾಗಣೆ, ಆರ್ಥಿಕ ಪರಾಧಗಳ ಜತೆ ಸೈಬರ್ ಅಪರಾಧಗಳಿಗೆ ನಂಟಿದೆ. ಈ ಜಾಲವನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರದ ನೆರವಿನಲ್ಲಿ ಸೈಬರ್ ಸುರಕ್ಷತೆಯನ್ನು ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದಿದ್ದಾರೆ.
‘ಪ್ರತಿಯೊಬ್ಬರೂ ಸೈಬರ್ ಸುರಕ್ಷತೆಯ ಬಗ್ಗೆ ಅರಿವು ಹೊಂದಬೇಕು. ತಮ್ಮ ಬ್ಯಾಂಕ್ ಖಾತೆಗಳು, ಡಿಜಿಟಲ್ ಸ್ವರೂಪದ ದಾಖಲೆಗಳ ರಕ್ಷಣೆಗೆ ಎಚ್ಚರಿಕೆ ವಹಿಸಬೇಕು. ಡಿಜಿಟಲೀಕರಣದ ಪ್ರಕ್ರಿಯೆಯಲ್ಲಿ ಕೋಡಿಂಗ್ನಲ್ಲಿ ಪ್ರಮಾದಗಳು ಆಗದಂತೆ ಮುನ್ನೆಚ್ಚರಿಕೆ ಇರಬೇಕು’ ಎಂದು ಸಲಹೆ ನೀಡಿದರು.