ರಾಜ್ಯ

ಅರ್ಚನಾ ರೆಡ್ಡಿ ಕೊಲೆ ಪ್ರಕರಣ: ಪತಿ ಬಳಿಕ ಪುತ್ರಿಯ ಬಂಧನ

Manjula VN

ಬೆಂಗಳೂರು: ಸೋಮವಾರ ರಾತ್ರಿ ಸಾರ್ವಜನಿಕರ ಎದುರೇ ಅರ್ಚನಾ ರೆಡ್ಡಿ ಎಂಬ ಮಹಿಳೆಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಬಳಿಕ ಇದೀಗ ಅರ್ಚನಾ ರೆಡ್ಡಿಯವರ ಪುತ್ರಿಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.

ಆಸ್ತಿ ಕಬಳಿಸುವ ಸಲುವಾಗಿ ಆರೋಪಿಗಳು ಅರ್ಚನಾ ರೆಡ್ಡಿಯವರನ್ನು ಹತ್ಯೆ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಈ ಹಿಂದೆ ಅರ್ಚನಾ ಅವರ ಎರಡನೇ ಪತಿ ನವೀನ್ ಕುಮಾರ್ ವಿ (ಕನ್ನಡ ಸಂಘಟನೆಯ ಸದಸ್ಯ), ಕಸವನಹಳ್ಳಿ ಸಂತೋಷ್ ಅವರನ್ನು ಬಂಧನಕ್ಕೊಳಪಡಿಸಿತ್ತು.

ಗುರುವಾರ ಅರ್ಚನಾ ರೆಡ್ಡಿಯವರ 21 ವರ್ಷದ ಯುವಕಾ ರೆಡ್ಡಿ ಸೇರಿ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಇನ್ನುಳಿದ ನಾಲ್ವರು ಬಂಧಿತರನ್ನು ಅನೂಪ್, ಆನಂದ್, ದೀಪಕ್, ನರೇಂದ್ರ ಎಂದು ಗುರ್ತಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಪೊಲೀಸರು ಇತರರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಅರ್ಚನಾ ರೆಡ್ಡಿ ಅವರು ತಮ್ಮ ಎರಡನೇ ಪತಿ ನವೀನ್ ಅವರೊಂದಿಗೆ ಹಣಕಾಸು ಮತ್ತು ವೈಯಕ್ತಿಕ ವಿಷಯಗಳಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ನವೀನ್ ಅರ್ಚನಾ ರೆಡ್ಡಿಯ ಮಗಳು ಯುವಿಕಾಳೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದ. ಆಕೆಯೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದ. ಇದರಿಂದ ತೀವ್ರವಾಗಿ ಕ್ರೋದಿತಳಾಗಿದ್ದ ಅರ್ಚನಾ ರೆಡ್ಡಿ ನವೀನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಅರ್ಚನಾ ಹೆಸರನಲ್ಲಿ ಕೆಲವು ಆಸ್ತಿಗಳಿರುವುದನ್ನು ತಿಳಿದುಕೊಂಡಿದ್ದ ನವೀನ್, ಅದನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ್ದ. ಇದರಂತೆ ಅರ್ಚನಾ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ಬಳಿಕ ಅರ್ಚನಾ ಅವರ ಪುತ್ರಿ ಯುವಿಕಾಳಿಗೂ ಈ ಬಗ್ಗೆ ತಿಳಿಸಿ ಆಕೆಯ ಮನವೊಲಿಸಿದ್ದ. ಆಸ್ತಿ ಬಂದಿದ್ದೇ ಆದರೆ, ಐಷಾರಾಮಿ ಜೀವನ ನಡೆಸಬಹುದು ಎಂದು ಹೇಳಿದ್ದ. ಇದಕ್ಕೆ ಯುವಿಕಾ ಒಪ್ಪಿಕೊಂಡಿದ್ದಾಳೆ. ನಂತರ ನವೀನ್ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಹತ್ಯೆಗೆ ಸಂಚು ರೂಪಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

SCROLL FOR NEXT