ರಾಜ್ಯ

ಪ್ರತ್ಯೇಕ ಘಟನೆ: ಕೊಡಗಿನಲ್ಲಿ ಒಂದು ಮರಿ ಸೇರಿ ಮೂರು ಆನೆಗಳ ಸಾವು

Srinivasamurthy VN

ಮಡಿಕೇರಿ: ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಮರಿಆನೆ ಸೇರಿದಂತೆ ಮೂರು ಆನೆಗಳು ಸಾವನ್ನಪ್ಪಿವೆ.

ದಕ್ಷಿಣ ಕೊಡಗಿನ ನಿಟ್ಟುರು ಗ್ರಾಮದ ಸಮೀಪವಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮರಿಆನೆ ಮತ್ತು ಒಂದು ಗಂಡಾನೆ ಮೃತಪಟ್ಟಿದೆ. ಹುಲಿ ದಾಳಿಯಲ್ಲಿ ಮರಿ ಆನೆ ಮೃತಪಟ್ಟಿರುವ ಶಂಕೆ ಇದ್ದು, ಮರಿ ಆನೆಗೆ ಸುಮಾರು ಒಂದು ತಿಂಗಳ ವಯಸ್ಸಾಗಿರಬಹುದು ಮತ್ತು ಗಂಡಾನೆಗೆ 12ರಿಂದ 15 ವರ್ಷವಯಸ್ಸಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.  

ನದಿ ದಡದ ಬಳಿ ಮೃತ ದೇಹ ಪತ್ತೆಯಾಗಿದ್ದು, ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಎಎಸ್‌ಎಫ್ ಅಧಿಕಾರಿ ಗೋಪಾಲ್ ಅವರು ಇತರೆ ಅರಣ್ಯ ಸಿಬ್ಬಂದಿಯೊಂದಿಗೆ ಪರಿಶೀಲನೆ ನಡೆಸಿದರು. ಮೃತ ಮರಿಆನೆ ದೇಹದ ಮೇಲಿರುವ ಗುರುತುಗಳನ್ನು ಆಧರಿಸಿ ಹುಲಿ ದಾಳಿಯಲ್ಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. 

ಗೋಣಿಕೊಪ್ಪಲಿನ ಮತ್ತೊಂದು ಆನೆ ಸಾವು
ಇತ್ತ ಗೋಣಿಕೊಪ್ಪಲಿನ ಕುಟ್ಟ ಬಳಿಯ ಪೂಜಿಕಲ್ಲು ವಿನ ಕಾಕೇರ ಕಾಳಪ್ಪ ಅವರ ಕಾಫಿ ತೋಟದಲ್ಲಿ ಅಂದಾಜು 15 ವರ್ಷ ಪ್ರಾಯದ ಗಂಡಾನೆ ಮೃತಪಟ್ಟಿದ್ದು, ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ. ಆನೆಯ ಮೈಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಶನಿವಾರ ರಾತ್ರಿ ಮೃತಪಟ್ಟಿರಬಹುದು.  ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ತಿಳಿಸಿದರು. 

ತಿತಿಮತಿ ಎಸಿಎಫ್ ಉತ್ತಪ್ಪ, ಡಿಆರ್‌ಎಫ್ಒ ಬೋಪಣ್ಣ, ಅರಣ್ಯ ರಕ್ಷಕ ರಾಜೇಶ್ ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಆನೆಯ ಶವ ಸಂಸ್ಕಾರ ನೆರವೇರಿಸಿದರು. ಪಶು ವೈದ್ಯಾಧಿಕಾರಿ ಚಂದ್ರಶೇಖರ್ ಅವರು ಮರಣೋತ್ತರ ಪರೀಕ್ಷೆ ನಡೆಸಿದರು.

SCROLL FOR NEXT