ರಾಜ್ಯ

ಯಾರಿಂದಲೂ ನಮ್ಮ ಕುಟುಂಬ ಒಡೆಯಲು ಸಾಧ್ಯವಿಲ್ಲ: ಹೆಚ್.ಡಿ. ರೇವಣ್ಣ

Sumana Upadhyaya

ಹಾಸನ: ಯಾರಿಂದಲೂ ನಮ್ಮ ಕುಟುಂಬ ಒಡೆಯಲು ಸಾಧ್ಯವಿಲ್ಲ. ಪ್ರಜ್ವಲ್ ರೇವಣ್ಣ ಆಗಲಿ, ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ನಾವೆಲ್ಲರೂ ಒಂದೇ ಕುಟುಂಬ ಸದಸ್ಯರಾಗಿ ಒಟ್ಟಿಗಿದ್ದೇವೆ. ಮಂಡ್ಯ ಸಂಸದೆ ಸುಮಲತಾ ಅವರು ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ, ನಮ್ಮ ಕುಟುಂಬವನ್ನು ಒಡೆಯುವ ಹೇಳಿಕೆಯನ್ನೂ ನಾನು ನೀಡುವುದಿಲ್ಲ ಎಂದು ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

ಹಾಸನದಲ್ಲಿ ಇಂದು ಮಾತನಾಡುತ್ತಿದ್ದ ವೇಳೆ, ಕುಮಾರಸ್ವಾಮಿಯವರು ಪ್ರಜ್ವಲ್ ರೇವಣ್ಣರನ್ನು ನೋಡಿ ಸಂಸ್ಕೃತಿ ಕಲಿಯಲಿ ಎಂದು ನೀಡಿರುವ ಹೇಳಿಕೆಗೆ ನೀವೇನನ್ನುತ್ತೀರಿ ಎಂದು ಸುದ್ದಿಗಾರರು ಕೇಳಿದಾಗ, ಥೂ..ಥೂ.. ಅದಕ್ಕೆಲ್ಲ ನಾನು ರಿಯಾಕ್ಟ್ ಮಾಡೋಕೆ ಹೋಗಲ್ಲ, ನಮ್ಮ ಕುಟುಂಬವನ್ನು ಯಾರಿಂದಲೂ ಒಡೆಯಲು ಸಾಧ್ಯವಿಲ್ಲ, ನಾವು ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ. ಅವರಿಗೆ ಭಗವಂತ ಒಳ್ಳೆಯದು ಮಾಡಲಿ, ನನ್ನ ಮಗನ ಹೆಸರು ಅವರು ಏಕೆ ಪ್ರಸ್ತಾಪಿಸಿದರು ಎಂದು ಕೇಳಿದರು.

ಕಳೆದ ಎಂಪಿ ಚುನಾವಣೆಯಲ್ಲಿ ಬಿಜೆಪಿ ನಾಯಕರು, ಮುಖ್ಯಮಂತ್ರಿ ಯಡಿಯೂರಪ್ಪನವರು ಸುಮಲತಾ ಅವರಿಗೆ ಸಹಾಯ ಮಾಡಿದ್ದಾರೆ, ಈಗಲೂ ಮಂಡ್ಯ ಜಿಲ್ಲೆಯ ಜನರ ಒಳಿತಿಗೆ ಸರ್ಕಾರದಿಂದ ಸಹಾಯ, ಅನುದಾನ ತರಿಸಿಕೊಳ್ಳಲಿ, ಕೆಲಸ ಮಾಡಿ ತೋರಿಸಲಿ, ಕುಮಾರಸ್ವಾಮಿಯವರು ದ್ವೇಷದ ರಾಜಕಾರಣ ಮಾಡುವುದಿಲ್ಲ, ಅಂಬರೀಷ್ ಅವರ ಬಗ್ಗೆ ನಮಗೆ ಗೌರವ ಇದೆ, ಅದನ್ನು ಸುಮಲತಾ ಅವರು ಉಳಿಸಿಕೊಳ್ಳಲಿ ಎಂದರು. 

SCROLL FOR NEXT