ಬೆಂಗಳೂರು: ಪತ್ನಿಯ ಜೊತೆ ಬ್ಯಾಂಕ್ಗೆ ಬಂದಿದ್ದ ರೌಡಿಶೀಟರ್ನನ್ನು ಕೋರಮಂಗಲದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಡುಗೋಡಿ ಪೊಲೀಸ್ ಠಾಣೆ ರೌಡಿ ಶೀಟರ್ ಬಬ್ಲಿ ಕೊಲೆಯಾದ ವ್ಯಕ್ತಿ.
ಬೆಂಗಳೂರಿನ ಕೋರಮಂಗಲದಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಗೆ ನುಗ್ಗಿ ರೌಡಿಶೀಟರ್ನನ್ನು ಹತ್ಯೆ ಮಾಡಲಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ ಆರೋಪಿಗಳು ಹತ್ಯೆ ಮಾಡಿ ದ್ವಿಚಕ್ರ ವವಾಹನದಲ್ಲಿ ಪರಾರಿಯಾಗಿದ್ದಾರೆ.
ಹತ್ಯೆಗೀಡಾದ ಆಡುಗೋಡಿ ರೌಡಿಶೀಟರ್ ಜೋಸೆಫ್ ಅಲಿಯಾಸ್ ಬಬ್ಲಿ ತನ್ನ ಪತ್ನಿಯ ಜೊತೆ ಕೋರಮಂಗಲದ 8ನೇ ಬ್ಲಾಕ್ನಲ್ಲಿನ ಯೂನಿಯನ್ ಬ್ಯಾಂಕ್ಗೆ ಬಂದಿದ್ದ. ದುಷ್ಕರ್ಮಿಗಳು ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬೈಕ್ಗಳಲ್ಲಿ ಬಂದಿದ್ದ 8 ಮಂದಿ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದಾರೆ. ಮಧ್ಯಾಹ್ನ 1.15ರ ಸುಮಾರಿಗೆ ಘಟನೆ ನಡೆದಿದ್ದು, ಬಬ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್. ಸ್ಥಳಕ್ಕೆ ಆಗ್ನೇಯ ಡಿಸಿಪಿ ಜೋಶಿ ಶ್ರೀನಾಥ್ ಮಹದೇವ್ ಭೇಟಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಮಡಿವಾಳ ಎಸಿಪಿ ಸುಧೀರ್ ಹೆಗ್ಗಡೆ ಸಹ ದೌಡಾಯಿಸಿದ್ದಾರೆ. ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್ ತಂಡ ಮತ್ತು ಎಫ್ಎಸ್ಎಲ್ ತಂಡದವರು ಭೇಟಿ ನೀಡಿದ್ದಾರೆ.
ಹಲ್ಲೆ ನಡೆಯುತ್ತಿದ್ದಂತೆ ಬ್ಯಾಂಕ್ ನಲ್ಲಿದ್ದ ಕೆಲವರು ಗ್ರಾಹಕರು ಡಕಾಯಿತಿ ಮಾಡಲು ಬಂದಿದ್ದಾರೆ ಎಂದು ತಿಳಿದು ಬ್ಯಾಂಕ್ ನಿಂದ ಓಡಿ ಹೋಗಿದ್ದಾರೆ, ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಿರುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ. 2011 ರವರೆಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಳಿಕ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಹೇಳಿದ್ದಾರೆ.
2006 ರಲ್ಲಿ ಬಬ್ಲಿ ಅವರ ಮಾವ ಪಳನಿಯನ್ನು ಹಾಸ್ಮಾಟ್ ಆಸ್ಪತ್ರೆಯಲ್ಲಿ ಸುಮಾರು 20 ಮಂದಿಯ ತಂಡ ಹಲ್ಲೆ ನಡೆಸಿ ಕೊಂದಿತ್ತು. ಈ ಘಟನೆ ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿತ್ತು. ಬಬ್ಲಿ ಬಾವ-ಮೈದುನ ಜಾರ್ಜ್ ಕೂಡ ರೌಡಿ ಶೀಟರ್, ಇತ್ತೀಚೆಗೆ ಅಶೋಕ ನಗರದಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಹಳೇಯ ದ್ವೇಷದ ಹಿನ್ನೆಲೆಯಲ್ಲಿ ಬಬ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಕ್ರಿಮಿನಲ್ ಶಿವಕುಮಾರ್ ಮತ್ತು ಬಬ್ಲಿ ನಡುವೆ ವೈಷಮ್ಯವಿತ್ತು ಎನ್ನಲಾಗಿದೆ. ಇದೊಂದು ಸುಪಾರಿ ಕೊಲೆಯಾಗಿದೆ, ಬ್ಯಾಂಕ್ ನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.