ರಾಜ್ಯ

ನಿರ್ಮಾಪಕನ ಮನೆ ಕಳವು ಪ್ರಕರಣ: ಕಾರು ಚಾಲಕ ಸೇರಿ ಇಬ್ಬರ ಬಂಧನ

Manjula VN

ಬೆಂಗಳೂರು: ಕನ್ನಡ ಚಿತ್ರ ನಿರ್ಮಾಪಕನ ಮನೆಯಲ್ಲಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದೆ. ಹನುಮಂತನಗರ ಪೊಲೀಸರು ನಿರ್ಮಾಪಕನ ಕಾರು ಸೇರಿದಂತೆ ಇಬ್ಬರು ಆರೋಪಿಗಳನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 

ಬಂಧಿತರನ್ನು ಚಂದ್ರಶೇಖರ್ (32) ಹಾಗೂ ಆತನ ಸ್ನೇಹಿತ ಅಭಿಷೇಕ್ (34) ಎಂದು ಗುರ್ತಿಸಲಾಗಿದೆ. ಆರೋಪಿಗಳಿಬ್ಬರೂ ಹೊಸಕೆರೆಹಳ್ಳಿ ನಿವಾಸಿಗಳಾಗಿದ್ದಾರೆಂದು ತಿಳಿದುಬಂದಿದೆ.

ಮನೆಯಲ್ಲಿ ಜುಲೈ 10ರಂದು ಕಳ್ಳತನವಾಗಿದ್ದು, ದುಷ್ಕರ್ಮಿಗಳು ಮನೆಯಲ್ಲಿದ್ದ ರೂ. 3 ಲಕ್ಷ ನಗದು ಹಾಗೂ 710 ಗ್ರಾಂ ಚಿನ್ನಾಭರಣ ಹೊತ್ತೊಯ್ದಿದ್ದಾರೆಂದು ನಿರ್ಮಾಪಕ ದೂರು ನೀಡಿದ್ದರು.

ಇದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಆರೋಪಿಗಳ ಕುರಿತು ಕೆಲ ಸುಳಿವುಗಳು ಸಿಕ್ಕಿವೆ. ಈ ಸುಳಿವುಗಳನ್ನು ಆಧರಿಸಿ ಚಂದ್ರಶೇಖರ್ ಹಾಗೂ ಅಭಿಷೇಕ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಆರೋಪಿ ಚಂದ್ರಶೇಖರ್ ನಿರ್ಮಾಪಕನ ಕಾರು ಚಾಲಕನಾಗಿದ್ದು, ಈತ ಮನೆಯ ನಕಲಿ ಕೀ ಮಾಡಿಸಿಟ್ಟುಕೊಂಡಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ನೇಹಿತ ಅಭಿಷೇಕ್ ಕೈಗೆ ನಕಲಿ ಕೀ ಕೊಟ್ಟು ಕಳ್ಳತನ ಮಾಡಿಸಿದ್ದ. ಕದ್ದ ಆಭರಣಗಳನ್ನು ಅಡವಿಟ್ಟು ಹಣ ಪಡೆದಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಜಪ್ತಿ ಪ್ರಕ್ರಿಯೆ ನಡೆದಿದೆ’ ಎಂದೂ ಮೂಲಗಳು ತಿಳಿಸಿವೆ.

SCROLL FOR NEXT