ರಾಜ್ಯ

ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿದ್ದೀರಾ? ಈಗಲೂ ಸಕ್ರಮಗೊಳಿಸಿಕೊಳ್ಳುವ ಅವಕಾಶ ನಿಮಗಿದೆ!

Manjula VN

ಬೆಂಗಳೂರು: ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಮೀನುಗಳಲ್ಲಿ 2015ರ ಜ.1ಕ್ಕಿಂತ ಮೊದಲು ಅನಧಿ​ಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಅವಕಾಶವನ್ನು 2022ರ ಮಾ.31ರವರೆಗೆ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಅರ್ಜಿಗಳನ್ನ ಸ್ವೀಕರಿಸಲು 2019ರ ಮಾ.31ರವರೆಗೆ ಕಾಲಾವಕಾಶ ನಿಗದಿಪಡಿಲಾಗಿತ್ತು. ಸದ್ಯಕ್ಕೆ 2022ರ ಮಾ.31ರ ಕಾಲಾವಕಾಶ ನೀಡಲಾಗಿದೆ. ಅರ್ಜಿಗಳನ್ನು ಸ್ವೀಕರಿಸಿ, ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಫಲಾನುಭವಿಗಳಿಗೆ 2023ರ ಮಾ.31ರ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಬಗರ್‌ಹುಕುಂ ಸಾಗುವಳಿಯ ಭೂಮಿ ಸಕ್ರಮಗೊಳಿಸುವ ತಂತ್ರಾಂಶಕ್ಕೆ ಅಪ್‌ಲೋಡ್‌ ಆಗದೇ ಇರುವ 4.83 ಲಕ್ಷ ಅರ್ಜಿಗಳನ್ನು ಜುಲೈ 31 ರೊಳಗೆ ಅಪ್‌ಲೋಡ್‌ ಮಾಡಲಾಗುವುದು. ಇದರಿಂದ ಅರ್ಜಿ ಸಲ್ಲಿಸಿರುವ ಅರ್ಹ ರೈತರ ಜಮೀನು ಸಕ್ರಮಕ್ಕೆ ಅನುಕೂಲವಾಗಲಿದೆ. ಸರ್ಕಾರಿ ಜಮೀನಿನಲ್ಲಿ 2005 ಜನವರಿ 1 ಕ್ಕೂ ಮೊದಲು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂರಹಿತರು, ಸಣ್ಣ ರೈತರ ಜಮೀನುಗಳನ್ನು ಸಕ್ರಮಗೊಳಿಸಲು ಅರ್ಜಿಗಳನ್ನು ಅಪ್‌ಲೋಡ್‌ ಮಾಡಲು ಮತ್ತೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

SCROLL FOR NEXT