ರಾಜ್ಯ

ರಾಜ್ಯದಲ್ಲಿ ಕೊರೋನಾ ಅಬ್ಬರ ಮತ್ತಷ್ಟು ಇಳಿಕೆ: ಹಲವು ವಾರಗಳ ಬಳಿಕ ಮೊದಲ ಬಾರಿಗೆ 10 ಸಾವಿರಕ್ಕಿಂತ ಕಡಿಮೆ ಕೇಸ್ ಪತ್ತೆ!

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹಾಗೂ ಸಾವಿನ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡು ಬಂದಿಗೆ. ಬರೋಬ್ಬರಿ 56 ದಿನಗಳ ಬಳಿಕ ರಾಜ್ಯದಲ್ಲಿ ದೈನಂದಿನ ಸೋಂಕು 10 ಸಾವಿರ ಮಿತಿಯೊಳಗೆ ಬಂದಿದ್ದು, 42 ದಿನಗಳ ಬಳಿಕ ನಿತ್ಯ ಸಾವಿನ ಸಂಖ್ಯೆ 200ರ ಗಡಿಯೊಳಗಿದೆ.

ರಾಜ್ಯದಲ್ಲಿ ಮಂಗಳವಾರ 9,808 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿ್ದು 179 ಮಂದಿ ಸಾವನ್ನಪ್ಪಿದ್ದಾರೆ. 

ಏಪ್ರಿಲ್ 13 ರ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಕೋವಿಡ್'ನ ದೈನಂದಿನ ಪ್ರಕರಣಗಳ ಸಂಖ್ಯೆ 10 ಸಾವಿರದಿಂದ ಕೆಳಗಿಳಿದಿದೆ. 

ಏಪ್ರಿಲ್ 27 ರಂದು 180 ಸಾವು ವರದಿಯಾದ ಬಳಿಕ ಮೊದಲ ಬಾರಿಗೆ ಸಾವಿನ ಪ್ರಮಾಣ 200ಕ್ಕಿಂತ ಕಡಿಮೆ ದಾಖಲಾಗಿದೆ. 

ಕಳೆದ ನಾಲ್ಕು ದಿನದಿಂದ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.10ರೊಳಗೆ ಇದ್ದು, ಸಾವಿನ ಪ್ರಮಾಣದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಪ್ರಸ್ತುತ ರಾಜ್ಯದ ಮರಣ ಪ್ರಮಾಣ ಶೇ.1.82ಕ್ಕೆ ಇಳಿದಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 23,449 ಮಂದಿ ಗುಣಮುಖರಾಗಿದ್ದು, ಇದರೊಂದಿಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 24,60,165ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.89.99 ರಿಂದ 90.53ಕ್ಕೆ ಏರಿಕೆಯಾಗಿದೆ. 

ಈ ನಡುವೆ ಬೆಂಗಳೂರಿನಲ್ಲಿ ಸೋಂಕು ಪ್ರಮಾಣ ಏರಿಕೆಯಲ್ಲಿಯೇ ಇದ್ದು, ಸೋಮವಾರ 1,992 ಪತ್ತೆಯಾಗಿದ್ದರೆ, ಮಂಗಳವಾರ 2,028 ಹೊಸ ಪ್ರಕರಣಗಳು ಪತ್ತೆಯಾಗಿವೆ. 

ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿರುವ ಪ್ರಕಾರ, ದೇಶದಲ್ಲಿ ಪತ್ತೆಯಾಗಿರುವ ಒಟ್ಟಾರೆ ಪ್ರಕರಣಗಳ ಪೈಕಿ ಕೊರೋನಾ ಸಾಂಕ್ರಾಮಿಕ ರೋಗ ಈ ಐದು ರಾಜ್ಯಗಳಲ್ಲಿ ಗಂಭೀರ ಪರಿಣಾಮ ಬೀರಿದೆ ಎಂದು ತಿಳಿಸಿದೆ. 

ಮಹಾರಾಷ್ಟ್ರ (5,842,000), ಕರ್ನಾಟಕ (2,707,481), ಕೇರಳ (2,642,395), ತಮಿಳುನಾಡು (2,256,681), ಮತ್ತು ಆಂಧ್ರಪ್ರದೇಶ (1,763,211)ಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ತಿಳಿಸಿದೆ. ಅಲ್ಲದೆ, ಬೆಂಗಳೂರು ನಗರ, ಮೈಸೂರು, ಹಾಸನ, ತುಮಕುರು ಮತ್ತು ಬೆಳಗಾವಿಯಲ್ಲಿ ಅತೀ ಹೆಚ್ಚು ಸಕ್ರಿಯ ಪ್ರಕರಣಗಳಿರುವುದು ಕಂಡು ಬಂದಿದೆ. 

ಇನ್ನು ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 44 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 15,118ಕ್ಕೆ ಏರಿಕೆಯಾಗಿದೆ. ಅಲ್ಲದೆ, ಒಂದೇ ದಿನ 7,664 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 10,70,062ಕ್ಕೆ ಏರಿಕೆಯಾಗಿದೆ. 

SCROLL FOR NEXT