ರಾಜ್ಯ

ಕೋವಿಡ್-19: ರಾಜ್ಯದಲ್ಲಿ ಹೊಸ ಸೋಂಕಿತರ ಸಂಖ್ಯೆ ತಗ್ಗಿದರೂ, ಸರ್ಕಾರಕ್ಕೆ ಮರಣ ಪ್ರಮಾಣದ್ದೇ ಚಿಂತೆ!

Srinivasamurthy VN

ಬೆಂಗಳೂರು: ಕರ್ನಾಟಕದಲ್ಲಿ ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆಯಾದರೂ, ಹೆಚ್ಚುತ್ತಿರುವ ಮರಣ ಪ್ರಮಾಣವು ಆತಂಕಕಾರಿಯಾಗಿದೆ.

ನಿನ್ನೆ ಕೂಡ ರಾಜ್ಯದಲ್ಲಿ ಸಾವನ್ನಪ್ಪಿದ ಸೋಂಕಿತರ ಸಂಖ್ಯೆ 120ರ ಗಡಿ ದಾಟಿದ್ದು, ರಾಜ್ಯದ ಮರಣ ಪ್ರಮಾಣವು ಶೇ. 1.19 ಕ್ಕೆ ಏರಿಕೆಯಾಗಿದೆ. 125 ಸಾವಿನೊಂದಿಗೆ ರಾಜ್ಯದಲ್ಲಿ ಕೋವಿಡ್ ಬಲಿಯಾದವರ ಸಂಖ್ಯೆ 32,913 ಕ್ಕೆ ತಲುಪಿದೆ.

ರಾಜ್ಯದಲ್ಲಿ ಪ್ರತಿದಿನ 100 ಕ್ಕಿಂತ ಹೆಚ್ಚು ಸಾವುಗಳು ವರದಿಯಾಗುತ್ತಲೇ ಇದ್ದು, ಹೊಸ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿನ ಬೆಳವಣಿಗೆಯ ದರವು ಕಡಿಮೆಯಾಗುತ್ತಿರುವುದರಿಂದ ಮರಣ ಪ್ರಮಾಣ ಹೆಚ್ಚುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ದೈನಂದಿನ ಕೋವಿಡ್ ಪರೀಕ್ಷಾ ಪ್ರಮಾಣಗಳ ಕೂಡ ತಗ್ಗಿದ್ದು, ನಿನ್ನೆ ರಾಜ್ಯಾದ್ಯಂತ 1,29,617 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಶನಿವಾರ 1,48,027 ಪರೀಕ್ಷೆಗಳನ್ನು ನಡೆಸಲಾಗಿತ್ತು. ಅಂದು 9,785 ಹೊಸ ಸೋಂಕು ಪ್ರಕರಣಗಳು ವರದಿಯಾಗಿತ್ತು. ಜೂನ್ 9-11 ರಿಂದ ನಡೆಸಿದ ಪರೀಕ್ಷೆಗಳ ಸಂಖ್ಯೆ 1.60 ಲಕ್ಷಕ್ಕೂ ಹೆಚ್ಚು. ಜೂನ್ 9 ರಂದು 1,63,962 ಪರೀಕ್ಷೆಗಳನ್ನು ನಡೆಸಲಾಗಿತ್ತು. ಮರುದಿನ 1,67,731 ಪರೀಕ್ಷೆಗಳನ್ನು ಮತ್ತು ಜೂನ್ 11,1,69,695 ಪರೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ ಈ ಸಂಖ್ಯೆ ಶನಿವಾರ 1,48,027 ಕ್ಕೆ ಇಳಿದಿದ್ದು, ಭಾನುವಾರ 1,29,617 ಕ್ಕೆ ಇಳಿದಿದೆ.

ಮರಣ ಪ್ರಮಾಣವನ್ನು ಒಟ್ಟು ಪ್ರಕರಣಗಳ ಸಾವಿನ ಶೇಕಡಾವಾರು ಎಂದು ಲೆಕ್ಕ ಹಾಕಲಾಗುತ್ತದೆ. ಮರಣ ಪ್ರಮಾಣವನ್ನು ಶೇಕಡಾ 1 ಕ್ಕಿಂತ ಕಡಿಮೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಕರ್ನಾಟಕ ಭಾನುವಾರ ಎರಡು ತಿಂಗಳಲ್ಲಿ ಮೊದಲ ಬಾರಿಗೆ ಕಡಿಮೆ ಅಂದರೆ 7,810 ದೈನಂದಿನ ಹೊಸ ಸೋಂಕು ಪ್ರಕರಣಗಳನ್ನು ವರದಿ ಮಾಡಿದೆ. 

ಇನ್ನು ಸಕ್ರಿಯ ಪ್ರಕರಣಗಳು ಸಹ ಗಣನೀಯವಾಗಿ ಕುಸಿತವಾಗುತ್ತಿದ್ದು, ಶನಿವಾರ 1,91,796 ಕ್ಕೆ ಇಳಿಕೆಯಾಗಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಭಾನುವಾರ 1,80,835 ಕ್ಕೆ ಇಳಿದಿದೆ, ರಾಜ್ಯದ ಸಕಾರಾತ್ಮಕ ದರವು ಜೂನ್ 9 ರಿಂದ ಭಾನುವಾರದ ಹೊತ್ತಿಗೆ ಶೇ.8.79 ರಿಂದ ಶೇ 8.73 ಕ್ಕೆ ಇಳಿದಿದೆ. ಆದರೆ ಚಿಕ್ಕಮಗಳೂರಿನಲ್ಲಿ ಮಾತ್ರ ಸೋಂಕು ಪ್ರಮಾಣ ಹೆಚ್ಚಿದ್ದು, ಇಲ್ಲಿ ಸೋಂಕು ಸಕಾರತ್ಮಕ ದರ ಶೇ.17.32ರಷ್ಟಿದೆ. ಅಂತೆಯೇ ದಕ್ಷಿಣ ಕನ್ನಡದಲ್ಲಿ ಶೇ.15.67ರಷ್ಟಿದ್ದು ಮತ್ತು ಮೈಸೂರು ಶೇ.14.62 ರಷ್ಟಿದೆ. ಇದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

SCROLL FOR NEXT