ರಾಜ್ಯ

ಡೆಲ್ಟಾ ಪ್ಲಸ್ ಆತಂಕ; ಕೇರಳದ ಗಡಿಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರಕ್ಕೆ ಸೂಚನೆ: ಆರೋಗ್ಯ ಸಚಿವ ಡಾ. ಸುಧಾಕರ್

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೊಸ ರೂಪಾಂತರಿ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯವನ್ನು ಕೋವಿಡ್ ಮುಕ್ತವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಕೇರಳದಲ್ಲಿ ಶೇಕಡಾ 6ರಷ್ಟು ಅಂದರೆ 12 ಸಾವಿರದಷ್ಟು ಸೋಂಕಿತರು ಇರುವುದರಿಂದ ಕೇರಳಕ್ಕೆ ಹೊಂದಿಕೊಂಡಿರುವ ಗಡಿಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಬೇಕು, ಈಗಾಗಲೇ ಜಿಲ್ಲಾಧಿಕಾರಿಗಳಲ್ಲಿಯೂ ಈ ಬಗ್ಗೆ ಮಾತನಾಡಿದ್ದೇನೆ ಎಂದರು.

ಅತಿ ಹೆಚ್ಚು ಟೆಸ್ಟ್ ಗಳನ್ನು ಗಡಿಜಿಲ್ಲೆಗಳಲ್ಲಿ ಮಾಡಬೇಕಾಗುತ್ತದೆ. ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಕೊರೋನಾ ಮೂರನೇ ಅಲೆ ಬಂದರೂ ಮಕ್ಕಳಲ್ಲಿ ತೀವ್ರತರವಾದ ವ್ಯಾಧಿ ಉಲ್ಬಣವಾಗುವುದಿಲ್ಲ ಎಂದು ಇಡೀ ವಿಶ್ವದಲ್ಲಿ ತಜ್ಞರು, ಸಂಶೋಧಕರು ಹೇಳುತ್ತಿದ್ದಾರೆ. ಇದು ಸಮಾಧಾನಕರ ಅಂಶ. ಆದರೂ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.

ಡೆಲ್ಟಾ ಪ್ಲಸ್: ರಾಜ್ಯದಲ್ಲಿ 2 ಡೆಲ್ಟಾ ಪ್ಲಸ್ ಕೊರೋನಾ ಸೋಂಕಿನ ಪ್ರಕರಣಗಳು ಅಧಿಕೃತವಾಗಿ ವರದಿಯಾಗಿವೆ. ಬೆಂಗಳೂರಿನಲ್ಲಿ ಹಿರಿಯ ನಾಗರಿಕರಿಗೆ ಸೋಂಕು ಬಂದಿದೆ. ಅವರ ಮೇಲೆ ನಿಗಾ ಇಡಲಾಗಿದೆ. ಇವರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗಿದ್ದು ರಿಪೋರ್ಟ್ ಬರಬಹುದು ಎಂದರು.

ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಒಂದೇ ಗುಣಲಕ್ಷಣ ಹೊಂದಿದೆ. ಚಿಕಿತ್ಸೆ ವಿಧಾನ ಮಾತ್ರ ಸ್ವಲ್ಪ ಬೇರೆಯಾಗಿದೆ. ಯಾರೂ ಕೂಡ ಆತಂಕಪಡಬಾರದು. ಜನರು ಹೆಚ್ಚೆಚ್ಚು ಲಸಿಕೆ ಪಡೆಯಬೇಕು. ಈಗ ಕೊರೋನಾಗೆ ನೀಡುತ್ತಿರುವ ಲಸಿಕೆಯೇ ರೂಪಾಂತರಿಗೂ ಕೆಲಸ ಮಾಡಲಿದೆ ಎಂದು ಡಾ ಆರ್ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT