ರಾಜ್ಯ

ಬಳ್ಳಾರಿ: ಯುವ ಕಾಂಗ್ರೆಸ್ ಘಟಕದಿಂದ ರಾಹುಲ್ ಗಾಂಧಿ ಹೆಸರಿನಲ್ಲಿ ಬಿಳಿ ಹುಲಿ ದತ್ತು!

Manjula VN

ಹುಬ್ಬಳ್ಳಿ: ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಶಾಸಕರ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬೇಗುದಿ ಹುಟ್ಟಿಹಾಕಿದೆ. ಆದರೆ, ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಜಿಲ್ಲಾ ಯುವ ಘಟಕ ಸಂಸದ ರಾಹುಲ್‌ ಗಾಂಧಿ ಅವರ ಜನ್ಮದಿನದ ನಿಮಿತ್ತ ಅಟಲ್ ಬಿಹಾರಿ ಜಿಯೋಲಾಜಿಕಲ್ ಪಾರ್ಕ್ ನಲ್ಲಿರುವ ಬಿಳಿ ಹುಲಿಯೊಂದನ್ನು ದತ್ತುಪಡೆದುಕೊಂಡಿದೆ. 

ಬಳ್ಳಾರಿ–ವಿಜಯನಗರ ಜಿಲ್ಲೆ ಗ್ರಾಮೀಣ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಿದ್ದು ಹಳ್ಳೇಗೌಡ ಅವರು, ಹಂಪಿಯ ಪ್ರಾಣಿ ಸಂಗ್ರಹಾಲಯದಲ್ಲಿ ಬಿಳಿ ಹುಲಿಯನ್ನು ರಾಹುಲ್​ ಗಾಂಧಿ ಅವರ ಹೆಸರಿನಲ್ಲಿ ಒಂದು ವರ್ಷಕ್ಕೆ (ಜೂನ್​ 19ರಂದು) ದತ್ತು ಪಡೆದುಕೊಂಡಿದ್ದಾರೆ. 

ಹುಲಿ ಸಂತತಿ ಸಂರಕ್ಷಣೆಗಾಗಿ ಪ್ರಾಜೆಕ್ಟ್​ ಹುಲಿ ಎಂಬ ಯೋಜನೆಯನ್ನು 1973ರಲ್ಲಿ ಅಂದಿನ ಪ್ರಧಾನ ಮಂತ್ರಿ, ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಅವರು ಕೇಂದ್ರ ಸರ್ಕಾರದ ವತಿಯಿಂದ ಜಾರಿಗೆ ತಂದಿದ್ದರು. ಹೀಗಾಗಿ ರಾಹುಲ್ ಗಾಂಧಿಯವರ ಜನ್ಮದಿನ ಹಿನ್ನೆಲೆಯಲ್ಲಿ ಏನಾದರೂ ಸಮಾಜ ಕಾರ್ಯ ಮಾಡಬೇಕೆಂದು ಆಲೋಚಿಸಿದ್ದೆವು. ಇದರಂತೆ ಮೃಗಾಲಯದಲ್ಲಿ ನಮ್ಮ ನಾಯಕನ ಹೆಸರಿನಲ್ಲಿ ಬಿಳಿ ಹುಲಿಯನ್ನು ದತ್ತುಪಡೆದುಕೊಂಡೆವು ಎಂದು ಬಳ್ಳಾರಿ ಮತ್ತು ವಿಜಯನಗರ ಗ್ರಾಮೀಣ ಭಾಗದ ಯುವ ಕಾಂಗ್ರೆಸ್​ ಅಧ್ಯಕ್ಷ ಸಿದ್ದು ಹಳ್ಳೇಗೌಡ ಅವರು ಹೇಳಿದ್ದಾರೆ. 

ಸಾಮಾನ್ಯವಾಗಿ ಆನ್'ಲೈನ್ ಮೂಲಕವೇ ದತ್ತು ಪ್ರಕ್ರಿಯೆ ನಡೆಸಿ ಪ್ರಮಾಣಪತ್ರ ನೀಡಲಾಗುತ್ತದೆ. ಆದರೆ, ಕಾಂಗ್ರೆಸ್ ನಾಯಕರು ಮೃಗಾಲಯಕ್ಕೆ ಭೇಟಿ ನೀಡಿ, ದತ್ತು ಪಡೆಯುವ ಹುಲಿಯನ್ನು ನೋಡಬೇಕೆಂದು ತಿಳಿಸಿದ್ದರು. ಹೀಗಾಗಿ ಮೃಗಾಲಯಕ್ಕೆ ಬರಲು ಅನುಮತಿ ನೀಡಲಾಗಿತ್ತು ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ. 

ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ಸ್ಯಾಂಡಲ್ ವುಡ್ ನಟ ದರ್ಶನ್ ತೂಗುದೀಪ ಅವರು ಕರೆಕೊಟ್ಟ ಹಿನ್ನೆಲೆಯಲ್ಲಿ ಸಾಕಷ್ಟು ಜನರು, ಸಂಘಟನೆಗಳು ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆಂದು ತಿಳಿಸಿದ್ದಾರೆ. 

ನಟ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕೇವಲ ಕೆಲವು ವಾರಗಳಲ್ಲಿ 1 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಲಾಗಿದೆ. ಮೈಸೂರು ಹಾಗೂ ಬೆಂಗಳೂರಿನ ಬನ್ನೇರುಘಟ್ಟ ಮೃಗಾಲಯದಲ್ಲಿ ಅತೀ ಹೆಚ್ಚು ಪ್ರಾಣಿಗಳನ್ನು ದತ್ತು ಪಡೆದುಕೊಳ್ಳಲಾಗಿದೆ ಎಂದು ರಾಜ್ಯ ಮೃಗಾಲಯಗಳ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ನಡುವೆ ಪ್ರಾಣಿಗಳ ದತ್ತು ಪಡೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿ-ಪಕ್ಷಿ ಪ್ರಿಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. 

ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಮೃಗಾಲಯಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಹೀಗಾಗಿ ಪ್ರಾಣಿಗಳ ಪಾಲನೆ ಮಾಡುವುದು ಅಧಿಕಾರಿಗಳಿಗೆ ಕಷ್ಟಕರವಾಗಿವೆ. ಇಂತಹ ಸಂದರ್ಭದಲ್ಲಿ ಪ್ರಾಣಿಗಳ ದತ್ತು ಪಡೆಯುವುದರಿಂದ ಮೃಗಾಲಯಗಳ ನಿರ್ವಹಣೆಗೆ ಸಹಾಯ ಮಾಡಿದಂತಾಗುತ್ತದೆ ಎಂದು ಮೃಗಾಲಯದ ನಿವೃತ್ತ ಅಧಿಕಾರಿ ಜಯರಾಮ್ ಆರ್ ಎಂಬುವವರು ಹೇಳಿದ್ದಾರೆ. 

SCROLL FOR NEXT