ರಾಜ್ಯ

ವಿಐಎಸ್ ಎಲ್ ನಲ್ಲಿ ಆಕ್ಸಿಜನ್ ಉತ್ಪಾದನೆ ಹೆಚ್ಚಿಸಲು ನೆರವು- ಸಚಿವ ಜಗದೀಶ್ ಶೆಟ್ಟರ್ 

Nagaraja AB

ಶಿವಮೊಗ್ಗ: ಭದ್ರಾವತಿಯಲ್ಲಿರುವ ವಿಐಎಸ್ಎಲ್ ಆಕ್ಸಿಜನ್ ಪ್ಲಾಂಟ್ ನಲ್ಲಿ ಆಕ್ಸಿಜನ್ ಉತ್ಪಾದನೆ ಪುನಾರಂಭಿಸಲಾಗಿದ್ದು, ಇದನ್ನು ಹೆಚ್ಚಿಸಲು ರಾಜ್ಯ ಸರಕಾರದ  ವತಿಯಿಂದ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಅವರಿಂದು ವಿಐಎಸ್ಎಲ್ ಗೆ ಭೇಟಿ ನೀಡಿ ಆಕ್ಸಿಜನ್ ಉತ್ಪಾದನಾ ಘಟಕ, ಬಾಟ್ಲಿಂಗ್ ಪ್ಲಾಂಟ್ ವೀಕ್ಷಣೆ ಮಾಡಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಪ್ರತಿದಿನ 150 ಸಿಲಿಂಡರ್ ಅಕ್ಸಿಜನ್ ಉತ್ಪಾದನೆ ಆರಂಭಿಸಲಾಗಿದೆ. ಹೊಸ ಕಂಪ್ರೆಸ್ಸರ್ ಅಳವಡಿಸಿದರೆ ಉತ್ಪಾದನೆಯನ್ನು  400 ರಿಂದ 500 ಸಿಲಿಂಡರ್ ಗಳಿಗೆ ಹೆಚ್ಚಿಸಬಹುದೆಂದ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಕಂಪ್ರೆಸ್ಸರ್ ಖರೀದಿ ಸೇರದಿಂತೆ ಸರಕಾರದಿಂದ  ಅಗತ್ಯವಿರುವ ನೆರವನ್ನು ನೀಡಲಾಗುವುದು ಎಂದು ಹೇಳಿದರು. 

ರಾಜ್ಯದಲ್ಲಿನ ಆಕ್ಸಿಜನ್ ಬೇಡಿಕೆಯನ್ನು ಈಡೇರಿಸಲು ಸರಕಾರದಿಂದ ಪ್ರಾಮಾಣೀಕ ಪ್ರಯತ್ನ ನಡೆಸಲಾಗುತ್ತಿದೆ. ಬಳ್ಳಾರಿ ಜಿಂದಾಲ್ ಕಂಫನಿಯಲ್ಲಿ ದ್ರವೀಕೃತ ಆಮ್ಲಜನಕ ಉತ್ಪಾದನೆಯನ್ನು 1000 ಎಂ.ಟಿ ಗಳಿಗೆ ಹೆಚ್ಚಿಸುವಂತೆ ಮನವಿ ಮಾಡಲಾಗಿದೆ. ಅಲ್ಲದೆ, ರಾಜ್ಯದ ಇತರೆ ಭಾಗಗಳಲ್ಲಿ ಸ್ಥಗಿತಗೊಂಡಿದ್ದ ಆಮ್ಲಜನಕ ಘಟಕಗಳನ್ನು ಪುನಃ ಅರಂಭಿಸಲು ಅಗತ್ಯ ನೆರವನ್ನು ನೀಡಲಾಗುವುದು. ಎಲ್ಲಿ ಈ ಘಟಕಗಳನ್ನು ಪುನಃ ಪ್ರಾರಂಭಿಸಬಹುದೋ ಅಂತಹ  ಘಟಕಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ದಿ ಹಾಗೂ ಶಿವಮೊಗ್ಗ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ಪಾದನೆ ನಿಲ್ಲಿಸಿರುವ ಘಟಕಗಳನ್ನು ಪುನಃ ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದರು.ನಂತರ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಮ್ಲಜನಕದ ಸ್ಥಿತಿ ಗತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

SCROLL FOR NEXT