ರಾಜ್ಯ

ಚಾಮರಾಜನಗರ: ಮೊಮ್ಮಕ್ಕಳಿಗೆ ಕೊರೋನಾ ಸೋಂಕು ಹರಡುವ ಭೀತಿಗೆ ಹೆದರಿ ವೃದ್ಧೆ ನೇಣಿಗೆ ಶರಣು

Nagaraja AB

ಚಾಮರಾಜನಗರ: ತನಗೆ‌ ಬಂದ ಕೊರೋನಾ ಸೋಂಕು ಮೊಮ್ಮಕ್ಕಳಿಗೂ ಹರಡಬಹುದು ಎಂದು ಹೆದರಿದ ವೃದ್ಧೆಯೊಬ್ಬರು
 ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ವೃದ್ದೆಯೊರ್ವಳಿಗೆ ಏಳು ದಿನದ ಹಿಂದೆ ಕೊರೊನಾ ಪಾಸಿಟಿವ್ ದೃಡಪಟ್ಟಿತ್ತು.
 ವೈದ್ಯರ ಸಲಹೆಯಂತೆ ಹೋಂ ಐಸೋಲೇಟ್ ಆಗಿದ್ದ ಆಕೆ ತನ್ನಿಂದ ತನ್ನ ಕುಟುಂಬಕ್ಕೂ ಕೊರೋನಾ ಹರಡುಬಿಡುತ್ತದೆ ಎಂದು ಹೆದರಿ ನೇಣಿಗೆ ಕೊರಳೊಡ್ಡಿದ ಘಟನೆ ಜರುಗಿದೆ.

ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಸಿದ್ದಮ್ಮ(70) ಮೃತ ದುರ್ದೈವಿ. ಈಕೆಗೆ ಮೇ 1 ರಂದು ಜ್ವರ ಕಾಣಿಸಿಕೊಂಡಿದ್ದು ಚಿಕಿತ್ಸೆಕೊಡಿಸಲಾಗಿದ್ದು  ಮೇ 3 ರಂದು ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ. ವೈದ್ಯರ ಸಲಹೆಯಂತೆ ಹೋಂ ಐಸೋಲೇಟ್ ಆಗಿದ್ದ ಸಿದ್ದಮ್ಮ ತನ್ನಿಂದ ಸೋಂಕು ತನ್ನ  ಮೊಮ್ಮಕ್ಕಳಿಗೆ ಹರಡುವುದೇನೂ ಎಂದು ಯೋಚಿಸುತ್ತ ಜಿಗುಪ್ಸೆಗೊಳಗಾಗಿದ್ದರು ಎನ್ನಲಾಗಿದೆ.

ಇಂದು ವೃದ್ಧೆಯ ಕೊಠಡಿಗೆ ಕಾಫಿ ನೀಡಲು‌ ಹೋದಾಗ  ಪ್ಲಾಸ್ಟಿಕ್ ಹಗ್ಗದಿಂದ ಮನೆಯ ಮೇಲ್ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವೃದ್ದೆಯ ಮಗ ಸೀಗನಾಯಕ ನನ್ನ ತಾಯಿ ಕೊರೊನಾ ಬಂದು ಜಿಗುಪ್ಸೆಗೊಳಗಾಗಿ ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ ಎಂದು ಕೊಳ್ಳೇಗಾಲ  ಗ್ರಾಮಾಂತರ ಪೊಲೀಸರಿಗೆ ತಿಳಿಸಿದ್ದಾರೆ. 

ವಿಚಾರ ತಿಳಿದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಶೋಕ್ ಹಾಗೂ ಸಿಬ್ಬಂದಿ ಶಿವಕುಮಾರ್ ಇನ್ನಿತರರು ಹಾಗೂ ವೈದ್ಯರು 
ಸ್ಥಳಕ್ಕೆ ದೌಡಾಯಿಸಿ ಕೊರೋನಾ ನಿಯಮಾವಳಿಯಂತೆ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ವರದಿ: ಗುಳಿಪುರ ಎಂ. ನಂದೀಶ್

SCROLL FOR NEXT