ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ತೀವ್ರಗೊಂಡಿದ್ದು, ಆಕ್ಸಿಜನ್ ಕೊರತೆ ಎದುರಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಜನರು ತಮ್ಮ ತಮ್ಮ ಮನೆಗಳಲ್ಲಿ ಆಕ್ಸಿಜನ್ ದಾಸ್ತಾನು ಮಾಡಿಕೊಳ್ಳುತ್ತಿದ್ದು, ಅಕ್ರಮವಾಗಿ ಆಕ್ಸಿಜನ್ ದಾಸ್ತಾನು ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ರಾಜ್ಯದಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆಯನ್ನು ಸರಿಪಡಿಸುವ ಸಲುವಾಗಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಶನಿವಾರ ಸಭೆ ನಡೆಸಿತು.
ಬಳಿಕ ಮಾತನಾಡಿದ ಅಧಿಕಾರಿಗಳು, ನಗರದಲ್ಲಿ ಎಲ್ಲಾ ಕೋವಿಡ್ ಕೇರ್ ಕೇಂದ್ರಗಳು ಹಾಗೂ ಎಲ್ಲಾ ವ್ಯವಸ್ಥೆಗಳು ಕಾರ್ಯಾಚರಣೆ ಮಾಡಲು ಆರಂಭಿಸಿದ ಬಳಿಕ ಆತಂಕಕ್ಕೊಳಗಾಗಿ ಮನೆಗಳಲ್ಲಿ ಆಕ್ಸಿಜನ್ ದಾಸ್ತಾನು ಮಾಡಿಕೊಂಡವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಈ ನಡುವೆ ಮಂಡ್ಯದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಗೆ ಸಂಸದೆ ಸುಮಲತಾ ಅಂಬರೀಷ್ ಸ್ವಂತ ಹಣ ಖರ್ಚು ಮಾಡಿ 2 ಸಾವಿರ ಲೀಟರ್ ಸಾಮರ್ಥ್ಯದ 20 ಜಂಬೋ ಸಿಲಿಂಡರ್ಗಳನ್ನು ಕೊಡಿಸಿದ್ದಾರೆ ಎಂಬುದು ಸತ್ಯ ಎಂದು ಸಾಬೀತಾಗಿದೆ.
ಸಂಸದೆ ಸುಮಲತಾ ಅವರು ಆಕ್ಸಿಜನ್ ಸಿಲಿಂಡರ್ ಕೊಡಿಸಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಹಾಗೂ ಸುರೇಶ್ ಗೌಡ ಆ ಸುದ್ದಿ ಸುಳ್ಳು ಎಂದು ಹೇಳಿದ್ದರು.
ಸರ್ಕಾರದಿಂದ ಮಂಜೂರಾದ ಆಕ್ಸಿಜನ್ ಸಿಲಿಂಡರ್ಗಳನ್ನೇ ಖರೀದಿಸಿ, ಅದನ್ನು ತಾವೇ ಸ್ವಂತ ಹಣದಲ್ಲಿ ನೀಡಿರುವುದಾಗಿ ಸುಮಲತಾ ಪ್ರಚಾರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಆರೋಪಗಳು ಕೇಳಿ ಬಂದ ಕೂಡಲೇ ಸಂಸದೆ ಸುಮಲತಾ ಅವರು, ಸ್ವತಃ ತಾವು ವೈದ್ಯಕೀಯ ಆಮ್ಲಜನಕ ಪೂರೈಸಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ.