ರಾಜ್ಯ

ಪೊಲೀಸರ ಪ್ರತಿ ನಡೆಯನ್ನು ಪ್ರಶ್ನೆ ಮಾಡುವ ಮುನ್ನ ನಮ್ಮ ನಡೆಯನ್ನು ಆತ್ಮಾವಲೋಕನ ಮಾಡಿಕೊಳ್ಳೋಣ: ಡಿಜಿಪಿ ಪ್ರವೀಣ್ ಸೂದ್

Sumana Upadhyaya

ಬೆಂಗಳೂರು: ಮೊನ್ನೆ ಮೇ 10ರಂದು ರಾಜ್ಯದಲ್ಲಿ ಕೊರೋನಾ ಲಾಕ್ ಡೌನ್ ಆರಂಭಗೊಂಡ ನಂತರ ಪೊಲೀಸರ ನಡೆಗೆ ವಿರೋಧ ಪಕ್ಷದ ನಾಯಕರು, ಸಾರ್ವಜನಿಕರು ಸಾಕಷ್ಟು ವಿರೋಧ, ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ಕೊರೋನಾ ಸೋಂಕು ತಡೆಗೆ ನಾಗರಿಕರು ಸಾಧ್ಯವಾದಷ್ಟು ಮನೆಯಿಂದ ಹೊರಬರದೆ ಮನೆಯೊಳಗೆ ಕುಳಿತುಕೊಳ್ಳಬೇಕೆಂದು ಸರ್ಕಾರದ ಜನಪ್ರತಿನಿಧಿಗಳು, ಪೊಲೀಸರು ಸಾಕಷ್ಟು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೂ ಕೆಲವರು ಮನೆಬಿಟ್ಟು ಆಚೆ ಸುಖಾಸುಮ್ಮನೆ ಬರುತ್ತಿದ್ದಾರೆ.

24 ಗಂಟೆಯಲ್ಲಿ ಬಹುತೇಕ ಸಮಯವನ್ನು ಹೊರಗೆ ಕಳೆಯುವ ಪೊಲೀಸರ ಜೀವನವೂ ಇಂತಹ ಸಂದರ್ಭದಲ್ಲಿ ಅಪಾಯದಲ್ಲಿರುತ್ತದೆ. ಈ ಸಂದರ್ಭದಲ್ಲಿ ನಾಗರಿಕರು ಪೊಲೀಸರಿಗೆ ಸಹಕರಿಸಬೇಕು ಎಂದು ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಕೋರಿದ್ದಾರೆ.

ಲಾಕ್ ಡೌನ್ ಮಾಡಿರುವುದು ಕೊರೋನಾ ತಡೆಗೆ ಸರ್ಕಾರ ಕೈಗೊಂಡಿರುವ ಅನನುಕೂಲಕರ ದಿಟ್ಟ ಕ್ರಮ. ಈ ಸಂದರ್ಭದಲ್ಲಿ ನಾಗರಿಕರು ಅಸಹಕಾರ ನೀಡಿದರೆ ಪೊಲೀಸರು ತಮ್ಮ ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ. ಪೊಲೀಸರ ಪ್ರತಿ ನಡೆಯನ್ನೂ ಪ್ರಶ್ನೆ ಮಾಡುವ ಬದಲು ನಾಗರಿಕರು ತಮ್ಮ ಸ್ವಂತ ಚಲನೆ, ನಡೆಯನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.

ತಮ್ಮ ಜೀವವನ್ನು ಅಪಾಯದಲ್ಲಿಟ್ಟು ನಾಗರಿಕರ ಹಿತರಕ್ಷಣೆಗೆ ಪೊಲೀಸರು ದುಡಿಯುತ್ತಿದ್ದಾರೆ.90 ಸಾವಿರ ಪೊಲೀಸರಲ್ಲಿ ಈಗಾಗಲೇ 13 ಸಾವಿರ ಪೊಲೀಸರು ಕೋವಿಡ್ ಸೋಂಕಿನಿಂದ ಬಳಲಿದ್ದಾರೆ. 130 ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೊನೆಯಿಲ್ಲದ ವಾದಗಳಿಂದ ಯಾರಿಗೂ ಪ್ರಯೋಜನವಿಲ್ಲ, ಸುರಕ್ಷತೆಯೂ ಇಲ್ಲ. ಮನೆಯಿಂದ ಹೊರಬರದೆ ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಿ ಎಂದು ಅವರು ಟ್ವೀಟ್ ಮೂಲಕ ಕೋರಿದ್ದಾರೆ.

SCROLL FOR NEXT