ರಾಜ್ಯ

ಮೈಸೂರು: ಕೊರೋನಾ ಸೋಂಕಿತ ಯುವಕನ ಮೇಲೆ ಗ್ರಾಮಸ್ಥರಿಂದ ಕಲ್ಲು ತೂರಾಟ!

Manjula VN

ಮೈಸೂರು: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಯುವಕನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮೈಸೂರಿನ ಕರಪುರ ಗ್ರಾಮದಲ್ಲಿ ನಡೆದಿದೆ. 

ಯುವಕನಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮದ ಪಂಚಾಯತ್ ಸದಸ್ಯರು ಮನೆಯಲ್ಲಿಯೇ ಇರುವಂತೆ ಯುವಕನಿಗೆ ಸೂಚಿಸಿದ್ದು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. 

ಆದರೆ, ಮನೆ ಬಳಿ ಕುಳಿತಿದ್ದ ಮುತ್ತೇ ಗೌಡ ಹಾಗೂ ಬಲರಾಮ್ ಎಂಬ ಕಿಡಿಕೇಡಿಗಳು ಗುಂಪು ಸೇರಿಸಿ ಸೋಂಕಿತನ ಮೇಲೆ ಏಕಾಏಕಿ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಅಲ್ಲದೆ, ಇತರೆ ಗ್ರಾಮದವರೂ ಕೂಡ ದಾಳಿ ಮಾಡುವಂತೆ ಪ್ರೇರೇಪಿಸಿದ್ದಾರೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಇತರರಿಗೂ ಸೋಂಕು ತಗಲುವ ಹಿನ್ನೆಲೆಯಲ್ಲಿ ಗ್ರಾಮಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ್ದಾರೆ. 

ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಸೋಂಕಿತ ಯುವಕರನ ಬಲ ಮೊಣಕೈ ಮೂಳೆ ಮುರಿದಿದೆ. ರಕ್ತ ತೀವ್ರವಾಗಿ ಸೋರುತ್ತಿದ್ದ ಹಿನ್ನೆಲೆಯಲ್ಲಿ ಯುವಕನ ಪೋಷಕರು ಕೂಗಾಡಿದ್ದು, ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಆ್ಯಂಬುಲೆನ್ಸ್ ಕರೆಸಿದ್ದು, ಹೆಚ್.ಡಿ.ಕೋಟೆಯ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ, 

ದಾಳಿ ಬಳಿಕ ಸೋಂಕಿತ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನನಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಈ ಮಾಹಿತಿ ತಿಳಿದ ಕೂಡಲೇ ದಾಳಿ ನಡೆಸಲು ಎದುರು ನೋಡುತ್ತಿದ್ದರು. ಮುತ್ತೇಗೌಡ ಹಾಗೂ ಬಲರಾಮ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದಾರೆಂದು ಆರೋಪಿಸಿದ್ದಾರೆ.

SCROLL FOR NEXT