ರಾಜ್ಯ

ಕರ್ನಾಟಕ ಕರಾವಳಿಗೆ ಅಪ್ಪಳಿಸಿದ ಟೌಕ್ಟೇ ಚಂಡಮಾರುತ, ಮಂಗಳೂರಿನಲ್ಲಿ 50 ಕುಟುಂಬ ಸ್ಥಳಾಂತರ

Lingaraj Badiger

ಮಂಗಳೂರು: ಟೌಕ್ಟೇ ಚಂಡಮಾರುತ ಕರ್ನಾಟಕ ಕರಾವಳಿಗೆ ಅಪ್ಪಳಿಸಿದ್ದು, ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದೆ. ಹೀಗಾಗಿ 50ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಮಳೆ, ಪ್ರವಾಹ ಸಂಬಂಧಿತ ಅನಾಹುತ ತಡೆಗೆ  ಜಿಲ್ಲೆಗೆ ಎನ್ ಡಿಆರ್ ಎಫ್ ತಂಡ ಆಗಮಿಸಿದೆ. ಜಿಲ್ಲೆಯ ಕೆಲವೆಡೆ ಶುಕ್ರವಾರ
ರಾತ್ರಿಯಿಂದಲೆ ಮಳೆ ಆರಂಭವಾಗಿದ್ದು ಶನಿವಾರವೂ ಮುಂದುವರೆದಿದೆ. ಮಳೆಯ ಜೊತೆಗೆ ಬಲವಾದ ಗಾಳಿಯಿಂದ ಸಮುದ್ರದಲ್ಲಿ
ಅಲೆಗಳ ಅಬ್ಬರ ಹೆಚ್ಚಾಗಿದೆ.

ಸೋಮೇಶ್ವರ ಮತ್ತು ಉಲ್ಲಾಳದಲ್ಲಿ ಸಮುದ್ರಕ್ಕೆ ಸಮೀಪದಲ್ಲಿರುವ ಹಲವಾರು ಮನೆಗಳು ಹಾನಿಯಾಗಿವೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ. 

ಸೋಮೇಶ್ವರದಲ್ಲಿ 14 ಕುಟುಂಬಗಳನ್ನು ಮದರಸಾದಲ್ಲಿ ತೆರೆಯಲಾದ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದ್ದು, ಇನ್ನೂ ಎಂಟು ಕುಟುಂಬಗಳನ್ನು ಉಲ್ಲಾಳದಲ್ಲಿರುವ ಸರ್ಕಾರಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇತರ ಕುಟುಂಬಗಳನ್ನು ಪಣಂಬುರು, ಮುಲ್ಕಿ ಮತ್ತು ಇತರ ಸ್ಥಳಗಳಿಂದ ಸ್ಥಳಾಂತರಿಸಲಾಗಿದೆ.

ಸ್ಥಳಾಂತರಿಸಿದ ಅನೇಕ ಜನರು ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಮಂಗಳೂರು ತಾಲ್ಲೂಕಿನಲ್ಲಿ ಮಾತ್ರ ಜಿಲ್ಲಾಡಳಿತ 20ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ತೆರೆದಿದೆ ಎಂದು ಅವರು ಹೇಳಿದ್ದಾರೆ.

ಚಂಡಮಾರುತದ ಪರಿಣಾಮ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಇನ್ನೂ ಕೆಲ ದಿನಗಳಮಟ್ಟಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

SCROLL FOR NEXT