ರಾಜ್ಯ

ಕೋವಿಡ್-19: ರಾಜ್ಯದಲ್ಲಿ ಒಂದೇ ದಿನ 58,000 ಮಂದಿ ಗುಣಮುಖ, ಚೇತರಿಕೆಯಲ್ಲಿ ದೇಶದಲ್ಲೇ ಅಗ್ರಸ್ಥಾನ ಪಡೆದ ಕರ್ನಾಟಕ

Manjula VN

ಬೆಂಗಳೂರು: ಒಂದು ತಿಂಗಳಿಂದ ರಾಜ್ಯದಲ್ಲಿ ಆತಂಕ ಹೆಚ್ಚಿಸುತ್ತಿದ್ದ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಸ್ವಲ್ಪ ಇಳಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 58,295 ಮಂದಿ ಗುಣಮುಖರಾಗಿದ್ದು, ಇದು ಸಾರ್ವಜಕಾಲಿಕ ದಾಖಲೆಯಾಗಿದೆ. ಅಲ್ಲದೆ, ಚೇತರಿಕೆಯಲ್ಲಿ ದೇಶದಲ್ಲಿಯೇ ಕರ್ನಾಟಕ ಅಗ್ರಸ್ಥಾನವನ್ನು ಪಡೆದುಕೊಂಡಿದೆ. 

ಮೇ.16ರಂದು 36,475 ಮಂದಿ ಗುಣಮುಖರಾಗಿದ್ದು, ಈ ವರೆಗಿನ ದಾಖಲೆಯಾಗಿತ್ತು. ಮಂಗಳವಾರ ನಿಮಿಷಕ್ಕೆ 41 ಮಂದಿ ಕೋವಿಡ್ ಸೋಂಕಿನಿಂದ ಮುಕ್ತರಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಗುಣಮುಖರಾಗಿರುವ ಕಾರಣ 6 ಲಕ್ಷ ದಾಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 5.75 ಲಕ್ಷಕ್ಕೆ ಇಳಿದಿದೆ. 

ರಾಜ್ಯದಲ್ಲಿ ಈ ವರೆಗೂ 72.08ರಷ್ಟಿದ್ದ ಚೇತರಿಕೆ ಪ್ರಮಾಣ ಇದೀಗ ಶೇ.73.68ಕ್ಕೆ ಏರಿಕೆಯಾಗಿದೆ. ಮೇ. 9 ಮತ್ತು ಮೇ.11ರ ಈ ಎರಡು ದಿನಗಳನ್ನು ಹೊರತುಪಡಿಸಿದರೆ ಮೇ.12 ರಿಂದಲೂ ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಏರಿಕೆಯಾಗುತ್ತಲೇ ಬರುತ್ತಿದೆ. 

ಬೆಂಗಳೂರಿನಲ್ಲಿ 3,64,382 ರಷ್ಟಿದ್ದ ಸಕ್ರಿಯ ಪ್ರಕರಣಗಳ 3,40,965 ಕ್ಕೆ ಇಳಿಕೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ಮೇ.16 ಮತ್ತು 18ರಂದು ಶೇ.64.71ರಷ್ಟಿದ್ದ ಚೇತರಿಕೆ ಪ್ರಮಾಣ ಇದೀಗ ಶೇ.67.29ಕ್ಕೆ ಏರಿಕೆಯಾಗಿದೆ. 

ಗುಣಮುಖರ ಸಂಖ್ಯೆ ಏರಿಕೆಯಾಗಿ, ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ರಾಜ್ಯದಲ್ಲಿ ಸಾವಿನ ಪ್ರಮಾಣ ಮಾತ್ರ ಏರುತ್ತಲೇ ಇದೆ. 

ರಾಜ್ಯದಲ್ಲಿ 5 ದಿನಗಳ ಬಳಿಕ ಸಾವಿನ ಪ್ರಮಾಣ 500ರ ಗಡಿ ದಾಟಿದೆ. ಮಂಗಳವಾರ 525 ಜನರು ಮೃತಪಟ್ಟಿದ್ದಾರೆ. ಈ ಮೊದಲು ಮೇ.7 ರಂದು 592, ಮೇ.10ರಂದು 596, ಮೇ.12 ರಂದು 512 ಮಂದಿ ಅಸುನೀಗಿದ್ದರು. 

ಇದೇ ವೇಳೆ ಶೇ.1.73 ಮರಣ ಪ್ರಮಾಣ ದಾಖಲಾಗಿದೆ. ಫೆ.24 ರಂದು ಶೇ.1.79 ಮರಣ ಪ್ರಮಾಣ ದಾಖಲಾಗಿದ್ದು, ಆ ಬಳಿಕದ ಗರಿಷ್ಠ ಮರಣ ಪ್ರಮಾಣ ಈಗ ವರದಿಯಾಗಿದೆ. 

SCROLL FOR NEXT