ರಾಜ್ಯ

ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ನಾಲ್ವರು ಆರೋಪಿಗಳ ಬಂಧನ

Manjula VN

ಬೆಂಗಳೂರು: ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. 

ಬಂಧಿತರನ್ನು ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದೋಯ್ ಬಾಬು ಮತ್ತು ಹಕೀಲ್ ಎಂದು ಗುರ್ತಿಸಲಾಗಿದೆ. ಘಟನೆ ಬಳಿಕ ಜೀವ ಭಯದಿಂದ ಯುವತಿ ಅಜ್ಞಾತವಾಗಿದ್ದಾಳೆಂದು ತಿಳಿದುಬಂದಿದೆ. 

ಬಂಧಿತ ಆರೋಪಿಗಳು ಬಾಂಗ್ಲಾದೇಶ ಮೂಲದವರಾಗಿದ್ದು, ಹಲವು ವರ್ಷಗಳಿಂದ ಅಕ್ರಮವಾಗಿ ರಾಮಮೂರ್ತಿ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಅಲ್ಲದೆ, ಆರೋಪಿಗಳು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಹಣವನ್ನು ಕಳ್ಳತನ ಮಾಡಿ ನಾಪತ್ತೆಯಾಗಿದ್ದಾಳೆ. ಬಳಿಕ ದಂಧೆಯ ಕಿಂಗ್ ಪಿನ್ ಆ ಮಹಿಳೆಯನ್ನು ಹುಡುಕಿ ಕರೆತಂದಿದ್ದಾನೆ. 

ಈ ವೇಳೆ ಮಹಿಳೆ ಬಳಿ ಹಣವನ್ನು ವಾಪಸ್ ಕೇಳಿದ್ದು, ಹಣ ನೀಡಲು ಆಕೆ ನಿರಾಕರಿಸಿದ್ದಾಳೆ. ಹಣಕಾಸು ವಿಚಾರವಾಗಿ ಸಿಟ್ಟಿಗೆದ್ದ ಆರೋಪಿಗಳು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಲ್ಲದೆ, ಗುಪ್ತಾಂಗಕ್ಕೆ ಬಿಯರ್ ಬಾಟಲ್ ಚುಚ್ಚಿ ಮೃಗೀಯವಾಗಿ ದೌರ್ಜನ್ಯ ಎಸಗಿದ್ದಾರೆ. ಬಳಿಕ ಲೈಂಗಿಕ ದೌರ್ಜನ್ಯದ ಕೃತ್ಯವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದಾರೆ. 

ವಾರಗಳ ಹಿಂದಷ್ಟೇ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಅಸ್ಸಾಂ ಯುವತಿ ಮೇಲೆ ಬಾಂಗ್ಲಾ ಯುವಕರು ಅತ್ಯಾಚಾರ ನಡೆಸಿದ್ದಾರೆಂದು ವದಂತಿ ಹಬ್ಬಿ ಈಶಾನ್ಯ ಭಾರತದಲ್ಲಿ ಜನಾಂಗೀಯ ಕಿಚ್ಚು ಹಚ್ಚಿದೆ ಎನ್ನಲಾಗಿದೆ. 

ಬಳಿಕ ಘಟನೆಯ ಸೂಕ್ಷ್ಮತೆ ಅರಿತ ಪಶ್ಚಿಮ ಬಂಗಾಳ ಪೊಲೀಸರು ಮೆಟ್ರೋ ಸಿಟಿಗಳಾದ ದೆಹಲಿ, ಜೈಪುರ ಹಾಗೂ ಬೆಂಗಳೂರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

ಬಳಿಕ ಘಟನೆಯ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇದೀಗ ಎಲ್ಲಾ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT