ರಾಜ್ಯ

ಕೋವಿಡ್ ಔಷಧಿಗಳ ಮೇಲಿನ ಜಿಎಸ್‌ ಟಿ ರದ್ದುಗೊಳಿಸಿ: ಯುವ ಕಾಂಗ್ರೆಸ್ ಆಗ್ರಹ

Manjula VN

ಶಿವಮೊಗ್ಗ: ಕೊರೋನಾಗೆ ಸಂಬಂಧಿಸಿದ ಎಲ್ಲಾ ಔಷಧಿಗಳ ಮೇಲಿನ ಜಿಎಸ್‌ಟಿ ರದ್ದುಗೊಳಿಸುವಂತೆ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರು ಶುಕ್ರವಾರ ಆಗ್ರಹಿಸಿದ್ದಾರೆ.

ಹರ್ಷ ದಿ ಫರ್ನ್ ಹೋಟೆಲ್ ಹಿಂಭಾಗದಲ್ಲಿರುವ ಅಲೆಮಾರಿ ಸಮುದಾಯದ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕೊರೋನಾ ವೈರಸ್ ವಿಶ್ವವನ್ನೇ ಕಾಡುತ್ತಿದೆ. ಜನರ ಬಳಿ ಹಣವಿಲ್ಲ. ಇಂತಹ ಸಂದರ್ಭದಲ್ಲೇ ಸರ್ಕಾರ ಔಷಧಿಗಳ ಮೇಲೂ ಜಿಎಸ್‌ಟಿ ತೆರಿಗೆ ವಸೂಲು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ವಿಶ್ವದಲ್ಲೇ ಕೊರೋನಾಗೆ ಲಸಿಕೆ ಉತ್ಪಾದಿಸುತ್ತಿರುವುದು ಭಾರತದಲ್ಲಿ. ಆದರೆ, ಇಲ್ಲಿನ ಜನರಿಗೆ ಲಸಿಕೆ ಸಿಗುತ್ತಿಲ್ಲ. ಇಲ್ಲಿ ಉತ್ಪಾದನೆಯಾದ ಲಸಿಕೆಗಳನ್ನು ಬೇರೆ ರಾಷ್ಟ್ರಗಳಿಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ  ತೋರುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ಕೊರೋನಾ 2ನೇ ಅಲೆ ದೇಶವನ್ನು ತತ್ತರಿಸುವಂತೆ ಮಾಡಿದೆ. 3ನೇ ಅಲೆ ಪ್ರಾರಂಭವಾಗಲಿದೆ. ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಕೂಡಲೇ ಸರ್ಕಾರ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು. ಮೂರನೇ ಅಲೆ ನಿಯಂತ್ರಿಸಲು ಸಜ್ಜಾಗಬೇಕಿದೆ ಎಂದು ತಿಳಿಸಿದ್ದಾರೆ, 

ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಕಾಂಗ್ರೆಸ್ ಪರಂಪರೆ. ಹಾಗಾಗಿ ದೇಶಾದ್ಯಂತ ಹಸಿವಿನಿಂದ ಬಳಲುತ್ತಿರುವ ಜನರಿಗೆ ಆಹಾರ ಕಿಟ್ ವಿತರಣೆ, ರೋಗಿಗಳಿಗೆ ಆಂಬುಲೆನ್ಸ್ ಸೇವೆ ಒದಗಿಸುವು ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ. 

SCROLL FOR NEXT