ರಾಜ್ಯ

ಕಲಬುರಗಿ: ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಪೊಲೀಸ್ ಪೇದೆ ಪುತ್ರನ ಬರ್ಬರ ಹತ್ಯೆ

Manjula VN

ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಪೊಲೀಸ್ ಪೇದೆಯೊಬ್ಬರ ಮಗನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ.

ವಿದ್ಯಾನಗರ ನಿವಾಸಿ, 27 ವರ್ಷದ ಅಭಿಷೇಕ್ ಎಂಬಾತನೇ ಕೊಲೆಯಾದ ಯುವಕನಾಗಿದ್ದಾನೆ.‌ ಈತನ ತಂದೆ ಚಂದ್ರಕಾಂತ ಪೊಲೀಸ್ ಪೇದೆಯಾಗಿದ್ದಾರೆ.

ಅಭಿಷೇಕ್ ಎಂದಿನಂತೆ ಇಂದು ಬೆಳಿಗ್ಗೆ ಕೂಡ ಜಿಮ್ ಗೆ ಹೋಗುವುದಾಗಿ ಮನೆಯಿಂದ ಬೈಕ್ ತೆಗೆದುಕೊಂಡು ಬಂದಿದ್ದಾನೆ. ಈ ವೇಳೆ ಏಳೆಂಟು ಜನರ ದುಷ್ಕರ್ಮಿಗಳ ತಂಡ ಆತನನ್ನು ಬೆನ್ನಟ್ಟಿದ್ದಾರೆ. ಮುಖ್ಯರಸ್ತೆಯಿಂದಲೇ ದುಷ್ಕರ್ಮಿಗಳು ಬೆನ್ನಟ್ಟಿದ್ದರಿಂದ ಬಸ್ ನಿಲ್ದಾಣದೊಳಗೆ ಅಭಿಷೇಕ್ ಓಡಿ ಬಂದಿದ್ದಾನೆ.

ಆದರೂ ಕೂಡ ಬೆನ್ನುಬಿಡದ ದುಷ್ಕರ್ಮಿಗಳು, ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕ ಎದುರೇ ಮರಕಾಸ್ತ್ರಗಳಿಂದ ಅಭಿಷೇಕ್ ಮೇಲೆ ದಾಳಿ ಮಾಡಿದ್ದಾರೆ. ಮನಸೋ ಇಚ್ಛೆ ಕೊಚ್ಚಿ, ಹತ್ಯೆ ಮಾಡಿ ಹಂತಕರು ಪರಾರಿಯಾಗಿದ್ದಾರೆ. ಘಟನೆಯ ಭೀಕರ ದೃಶ್ಯ ಕಂಡ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಸ್ಥಳಕ್ಕೆ ನಗರ ಉಪ ಪೊಲೀಸ್ ಆಯುಕ್ತ ಎ.ಶ್ರೀನಿವಾಸಲು, ಇನ್ ಸ್ಪೆಕ್ಟರ್ ಪಂಡಿತ ಸಗರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT