ರಾಜ್ಯ

ಚಲಿಸುತ್ತಿದ್ದ ರೈಲಿನಿಂದ ಇಳಿಯಲೆತ್ನಿಸಿ ಕೆಳಕ್ಕೆ ಬಿದ್ದ ಮಹಿಳೆ ರಕ್ಷಣೆ: ರೈಲ್ವೇ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Srinivasamurthy VN

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಇಳಿಯಲೆತ್ನಿಸಿದ ಮಹಿಳೆಯೋರ್ವರು ಆಯತಪ್ಪಿ ಕೆಳಕ್ಕೆ ಬಿದ್ದಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಸ್ಥಳದಲ್ಲಿದ್ದ ರೈಲ್ವೇ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ ಮಹಿಳೆಯ ಪ್ರಾಣ ಉಳಿದಿದೆ.

ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣ ಆವರಣದಲ್ಲಿ ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದ್ದು, ತಾಳಗುಪ್ಪ, ಬೆಂಗಳೂರು ಇಂಟರ್ ಸಿಟಿ ರೈಲು ಶಿವಮೊಗ್ಗ ನಿಲ್ದಾಣಕ್ಕೆ ಬೆಳಿಗ್ಗೆ ೬.೫೫ಕ್ಕೆ ಆಗಮಿಸಿತ್ತು. ೭.೦೫ ಕ್ಕೆ ರೈಲು ಬೆಂಗಳೂರಿಗೆ ಹೊರಟಿತ್ತು. ಸಂಬಂಧಿಕರೋರ್ವರನ್ನು ರೈಲು ಹತ್ತಿಸಲು ಮಹಿಳೆ ಆಗಮಿಸಿದ್ದರು. ಸಂಬಂಧಿಕರನ್ನು ರೈಲು ಹತ್ತಿಸಲು ಮಹಿಳೆ ರೈಲಿನೊಳಗೆ ಹೋಗುತ್ತಿದ್ದಂತೆಯೇ ರೈಲು ಚಲಿಸಲು ಆರಂಭಿಸಿದೆ. ರೈಲು ಹೊರಡುತ್ತಿದ್ದಂತೆ ಗಾಬರಿಯಿಂದ ಮಹಿಳೆ ರೈಲಿನಿಂದ ಇಳಿಯಲು ಮುಂದಾಗಿದ್ದಾರೆ. ಫ್ಲ್ಯಾಟ್’ಫಾರಂಗೆ ಕಾಲಿಟ್ಟ ಮಹಿಳೆಯು, ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. 

ಇದನ್ನು ಕಂಡ ಅಲ್ಲಿಯೇ ನಿಂತಿದ್ದ ರಾಜ್ಯ ರೈಲ್ವೆ ಪೊಲೀಸ್ ಇಲಾಖೆಯ ಅಣ್ಣಪ್ಪ, ಸಂತೋಷ್ ಕುಮಾರ್ ಬಿ.ಎಸ್. ಹಾಗೂ ಆರ್.ಪಿ.ಎಫ್. ಕಾನ್ಸ್’ಟೇಬಲ್ ಜಗದೀಶ್ ರವರು ಮಹಿಳೆಯನ್ನು ಹಿಡಿದ ಪಕ್ಕಕ್ಕೆ ಎಳೆದು ತಂದು ರಕ್ಷಣೆ ಮಾಡಿದ್ದಾರೆ. ರೈಲಿನ ಚಕ್ರಕ್ಕೆ ಮಹಿಳೆ ಸಿಲುಕದಂತೆ ಕಾಪಾಡಿದ್ದಾರೆ. ನಿಲ್ದಾಣದ ಸಿ.ಸಿ. ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

SCROLL FOR NEXT