ಬೆಂಗಳೂರು: ನವೆಂಬರ್ 27 ಮತ್ತು 28ರಂದು ಕಲಬುರಗಿಯಲ್ಲಿ ನಿಗದಿಪಡಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ 36ನೇ ಪತ್ರಕರ್ತರ ಸಮ್ಮೇಳನವನ್ನು ಮುಂದೂಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಲಬುರಗಿಯಲ್ಲಿ ಇದೇ ತಿಂಗಳು 27 ಮತ್ತು 28 ರಂದು ನಡೆಯಬೇಕಾಗಿದ್ದ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಲಿರುವ ಕಾರಣ ಮುಂದೂಡಲಾಗಿದ್ದು, ಡಿಸೆಂಬರ್ ನಲ್ಲಿ ಸಮ್ಮೇಳನ ಜರುಗಲಿದೆ ಎಂದು ಹೇಳಿದ್ದಾರೆ.
ಸಮ್ಮೇಳನದಲ್ಲಿ ಮುಖ್ಯಮಂತ್ರಿ ಭಾಗವಹಿಸಲು ಕೂಡ ಅನುಮತಿ ಪಡೆಯಲೇಬೇಕು ಎನ್ನುವ ಆಯೋಗದ ನಿರ್ದೇಶನ ಹಿನ್ನೆಲೆಯಲ್ಲಿ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಸರ್ಕಾರ ಪತ್ರ ಬರೆದರೂ ಅನುಮತಿ ಬರುವುದು ತಡವಾಗುತ್ತಿದೆ. ಚುನಾವಣಾ ಆಯೋಗದ ಅನುಮತಿ ಇಲ್ಲದೆ ಸಿಎಂ ಮತ್ತು ಸಚಿವರು ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ, ಸ್ವಾಗತ ಸಮಿತಿ ಕೋರಿಕೆ ಮೇರೆಗೆ ಸಮ್ಮೇಳನವನ್ನು ಡಿಸೆಂಬರ್ ತಿಂಗಳಿಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ದಿನಾಂಕ ಖಚಿತಪಡಿಸಿಕೊಂಡು ನಂತರ ಸಮ್ಮೇಳನದ ಹೊಸ ದಿನಾಂಕ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.