ರಾಜ್ಯ

ಬೆಂಗಳೂರು: ಸ್ಮಶಾನದಲ್ಲಿ ಅಡಗಿದ್ದ ರೌಡಿಶೀಟರ್ ಪಳನಿ ಬಂಧನ!

Lingaraj Badiger

ಬೆಂಗಳೂರು: ಕುಖ್ಯಾತ ರೌಡಿಶೀಟರ್ ಪಳನಿ ಅಲಿಯಾಸ್ ಕರ್ಚಿಪ್‌ನನ್ನು ಬಲೆಗೆ ಕೆಡವುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಮಶಾನದಲ್ಲಿ ಅಡಗಿದ್ದ ಕುಮಾರ್ ಸ್ವಾಮಿ ಲೇಔಟ್ ಹಾಗೂ ಅಶೋಕನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಪಳನಿಯನ್ನು ಬುಧವಾರ ಬಂಧಿಸಿದ್ದಾರೆ.

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಳನಿ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಆದರೆ, ಕೊಲೆ ಪ್ರಕರಣದ ಬಳಿಕ ತಲೆಮರಿಸಿಕೊಂಡಿದ್ದ. ಈತನ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರೌಡಿಶೀಟರ್ ಪಳನಿ ಬಂಧನದ ಬಗ್ಗೆ ಮಾಹಿತಿ ನೀಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ನಿನ್ನೆ ಎಸಿಪಿ ಪರಮೇಶ್ವರ್ ಅವರಿಗೆ ಅಶೋಕನಗರ ಬಳಿಯಿರುವ ಸ್ಮಶಾನದಲ್ಲಿ ಪಳನಿ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆತನನ್ನ ಬಂಧಿಸಲು ಎಸಿಪಿ ಹಾಗೂ ಇನ್ಸ್ ಪೆಕ್ಟರ್ ತಂಡ ತೆರಳಿತ್ತು. ಆತ ಶರಣಾಗದೇ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಎಸಿಪಿ ಪರಮೇಶ್ವರ್ ಅವರು ಶರಣಾಗುವಂತೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಪಳನಿ, ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಹರೀಶ್ ಕುಮಾರ್ ಗೆ ಡ್ಯಾಗರ್ ನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. 

ಈ ವೇಳೆ ಆತನ ಕಾಲಿಗೆ ಎಸಿಪಿ ಪರಮೇಶ್ವರ್ ಒಂದು ಸುತ್ತು ಗುಂಡು ಹಾರಿಸಿ ಬಂಧಿಸಿದ್ದಾರೆ ಅಂತಾ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರು ತಿಳಿಸಿದರು.

ಸದ್ಯ ಗಾಯಾಳು ಇನ್ಸ್ ಪೆಕ್ಟರ್ ಹಾಗೂ ಆರೋಪಿ ಪಳನಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಪಳನಿ ವಿರುದ್ಧ ಕೊಲೆ, ಕೊಲೆ ಯತ್ನ, ಕಳ್ಳತನ, ಸುಲಿಗೆ, ದರೋಡೆ ಸೇರಿದಂತೆ ನಗರದಲ್ಲಿ 15ಕ್ಕು ಹೆಚ್ಚು ಪ್ರಕರಣ ಈತನ ಮೇಲೆ ದಾಖಲಾಗಿದೆ ಅಂತಾ ಸಂದೀಪ್ ಪಾಟೀಲ್ ಇದೇ ವೇಳೆ ತಿಳಿಸಿದರು.

ಬೆಂಗಳೂರು ಪೊಲೀಸರಿಂದ 10 ರೌಡಿಶೀಟರ್‌ಗಳ ಬಂಧನ
ಕುಖ್ಯಾತ ರೌಡಿಶೀಟರ್ ಅಮೀನುದ್ದೀನ್ ನಯೀಮ್ ಸೇರಿದಂತೆ 10 ರೌಡಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಭದ್ರತಾ ಕಾಯ್ದೆಯ ವೈಯಕ್ತಿಕ ಮುಚ್ಚಳಿಕೆ ಹಾಗೂ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೂರ್ವ ವಿಭಾಗದ ಪೊಲೀಸರು ಈ ಬಂಧನ ಮಾಡಿದ್ದಾರೆ.

ಶಿವಾಜಿನಗರ ಠಾಣೆಯ ರೌಡಿಶೀಟರ್ ಆಗಿರುವ ಅಮೀನುದ್ದೀನ್ ಸೇರಿದಂತೆ ಈ 10 ಆರೋಪಿಗಳ ಮೇಲೆ ಸಿಆರ್ ಪಿಸಿ 110ರಡಿ ಈ ಹಿಂದೆ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ, ಭದ್ರತಾ ಕಾಯ್ದೆಯ ವೈಯಕ್ತಿಕ ಮುಚ್ಚಳಿಕೆ ಬರೆಸಿಕೊಂಡು ಜಾಮೀನು ನೀಡಲಾಗಿತ್ತು. ಆದ್ರೆ ಜಾಮೀನು ಪಡೆದ ಬಳಿಕ‌ ಮತ್ತೆ ಅಪರಾಧ ಕೃತ್ಯಗಳಲ್ಲಿ ಆರೋಪಿಗಳು ತೊಡಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದ 10 ರೌಡಿಶೀಟರ್ ಗಳನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

SCROLL FOR NEXT