ರಾಜ್ಯ

ಬಿಟ್ ಕಾಯಿನ್ ಹಗರಣ ತನಿಖೆ ನಡೆಸಲು ತಜ್ಞರ ನೆರವು ಪಡೆದುಕೊಳ್ಳಿ: ಸಿಎಂ ಬೊಮ್ಮಾಯಿಗೆ ಹೆಚ್.ಡಿ.ಕುಮಾರಸ್ವಾಮಿ

Manjula VN

ಬೆಂಗಳೂರು: ಬಿಟ್ ಕಾಯಿನ್ ವಿಚಾರದಲ್ಲಿ ಬರೀ ಗೊಂದಲ ಎಬ್ಬಿಸುವ ಬದಲಿಗೆ ಹಗರಣದ ಬಗ್ಗೆ ನುರಿತ ತಜ್ಞರ ಸಹಕಾರ ಪಡೆದು ಉನ್ನತಮಟ್ಟದ ತನಿಖೆ ನಡೆಸಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಂಗಳವಾರ ತಿಳಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ವಿಚಾರದಲ್ಲಿ ಬರೀ ಗೊಂದಲ ಎಬ್ಬಿಸಲಾಗುತ್ತಿದೆ. ನಿಖರ ಮಾಹಿತಿ ಯಾರ ಬಳಿಯೂ ಇಲ್ಲ ಎಂದು ಹೇಳಿದರು.

ಬಿಟ್ ಕಾಯಿನ್ ಹಗರಣ ಪ್ರಕರಣವನ್ನು ಇಡಿಗೆ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ನಿಖರ ಮಾಹಿತಿ ಯಾರ ಬಳಿಯೂ ಇಲ್ಲ.  ಏಳೆಂಟು ಬಾರಿ ಹಗರಣದ ಮಾಸ್ಟರ್ ಮೈಂಡ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ್ನು ಬಂಧನಕ್ಕೊಳಪಡಿಸಿ ತನಿಖೆಗೆ ಒಳಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶ್ರಿಕಿ‌ ಬಂಧಿಸಲಾಗಿತ್ತು ಎನ್ನಲಾಗಿದೆ. ಇದರ ಬಗ್ಗೆ ನುರಿತ ತಜ್ಞರಿಂದ ಮಾಹಿತಿ ಪಡೆದು ತನಿಖೆ ಮಾಡಬೇಕು. ಇಷ್ಟು ವರ್ಷ ಅವನ ಜೀವಕ್ಕೆ ಅಪಾಯ ಇರಲಿಲ್ಲ. ಈಗ ಅವನಿಗೆ ಜೀವ ಬೆದರಿಗೆ ಅಂದರೆ ಹೇಗೆ? ಕಾಂಗ್ರೆಸ್​ಗೆ ಈ ಬಗ್ಗೆ ಮಾಹಿತಿ ಇರಬೇಕು. ರಕ್ಷಣೆ ಕೊಡೋದು ತಪ್ಪಲ್ಲ, ಕೊಡಲಿ. ಎಂಥೆಂತವರಿಗೋ ರಕ್ಷಣೆ ನೀಡಲಾಗಿದೆ. ಇವರಿಗೂ ಕೊಡಲಿ ಬೇಡ ಅಂದವರು ಯಾರು..? ಎಂದು ಹೇಳಿದರು.

ಇದೇ ವೇಳೆ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ‌ರಿಂದ ಅವಹೇಳನಕಾರಿ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, ಆ ವಿಚಾರಗಳ ಬಗ್ಗೆ ಚರ್ಚೆ ಮಾಡೋದು ಅಗತ್ಯ ಇರಲಿಲ್ಲ. ಯಾರೇ ಆಗಲಿ ಧಾರ್ಮಿಕ ವಿಚಾರಗಳ ಬಗ್ಗೆ ಹೀಗೆ ಮಾತನಾಡೋದು ಸರಿಯಲ್ಲ ಎಂದು ತಿಳಿಸಿದರು.

ಐಟಿ-ಬಿಟಿ ಕ್ಷೇತ್ರಗಳಿಗೆ ನೀಡಿದ ಒತ್ತು ಸೇರಿದಂತೆ ಬೆಂಗಳೂರಿನ ಬೆಳವಣಿಗೆಗೆ ಜೆಡಿಎಸ್ ಅಪಾರ ಕೊಡುಗೆ ನೀಡಿದ್ದು, ಇದೀಗ ಪಕ್ಷವು ಬಿಬಿಎಂಪಿ ಚುನಾವಣೆಯತ್ತ ಗಮನ ಹರಿಸಲಿದೆ ಎಂದಿದ್ದಾರೆ.

ಈ ನಿಟ್ಟಿನಲ್ಲಿ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕು. ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚು ಮಹಿಳೆಯರನ್ನು ಪಕ್ಷ ಕಣಕ್ಕಿಳಿಸಲಿದೆ ಎಂದು ಮಾಹಿತಿ ನೀಡಿದರು

SCROLL FOR NEXT