ರಾಜ್ಯ

'ನನ್ನ ತಮ್ಮ ಮೃತ್ಯುಂಜಯ, ಮೃತ್ಯುವಾದ ಮೇಲೂ ಜಯ ನೋಡುತ್ತಿದ್ದಾನೆ, ಅಪ್ಪನನ್ನು ತಮ್ಮನಲ್ಲಿ ಕಂಡಿದ್ದೇವೆ: ನಟ ರಾಘವೇಂದ್ರ ರಾಜ್ ಕುಮಾರ್

Sumana Upadhyaya

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್(Puneet Rajkumar) ಅಗಲಿ 23 ದಿನಗಳಾಗಿದ್ದು, ರಾಜ್ಯ ಪೊಲೀಸ್ ಮೀಸಲು ಪಡೆ ಮತ್ತು ನಗರ ಸಂಚಾರ ಪೊಲೀಸ್ ಇಲಾಖೆ ಜಂಟಿಯಾಗಿ 66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಪುನೀತ್ ಸ್ಮರಣೆ ಸೈಕಲ್ ಜಾಥಾ ಹಮ್ಮಿಕೊಂಡಿದ್ದವು.

ನಗರದಲ್ಲಿ 50 ಕಿಲೋ ಮೀಟರ್ ಸುತ್ತು ಹಾಕಿ ಕಂಠೀರವ ಸ್ಡುಡಿಯೊಕ್ಕೆ ಸೈಕಲ್ ಜಾಥಾದಲ್ಲಿ ಬಂದು ಪುನೀತ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ನಟ ರಾಘವೇಂದ್ರ ರಾಜ್ ಕುಮಾರ್(Raghavendra Rajkumar) ಮಾತನಾಡಿ, ನನ್ನ ತಮ್ಮ ಅಪ್ಪು ಮೃತ್ಯುವಾದ ಮೇಲೂ ಜಯ ನೋಡುತ್ತಿದ್ದಾನೆ, ಹಾಗಾಗಿ ಅವನನ್ನು ಮೃತ್ಯುಂಜಯ ಎಂದು ಕರೆಯುತ್ತೇನೆ. ಅವನ ನೆನಪಿನಲ್ಲಿ ಸಮಾಜದ ವಿವಿಧ ವರ್ಗದ ಜನರು ವಿವಿಧ ರೀತಿಯಲ್ಲಿ ಸ್ಮರಣೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇಂದು ಪೊಲೀಸ್ ಇಲಾಖೆಯವರು ಬಂದು ನಮನ ಸಲ್ಲಿಸುತ್ತಿದ್ದಾರೆ ಎಂದರೆ ಇಷ್ಟು ದಿನ ಯಾರ ಜೊತೆಗೆ ಬದುಕಿದ್ದೆವು, ನಮ್ಮ ಜೊತೆ ಇಷ್ಟು ದಿನ ಇದ್ದವನು ಯಾರು ಎಂದು ನೆನೆದು ಅಚ್ಚರಿಯಾಗುತ್ತದೆ ಎಂದರು.

ನನ್ನ ತಂದೆಯೇ ಅಪ್ಪುವಿನ ದೇಹದೊಳಗೆ ಆತ್ಮವಾಗಿ ಇದ್ದರೇ ಎಂದು ಅನಿಸುತ್ತಿದೆ ನನಗೆ, ಅಪ್ಪಾಜಿ ಆತ್ಮ ಅಪ್ಪು ಮೈಯಲ್ಲಿ ಬದುಕಿಬಿಟ್ಟು ಹೋಗಿದ್ದರೇ ಎಂದು ಒಂದು ಕ್ಷಣ ಅನಿಸಿತು. ಇಂದು ಸಮಾಜದ ವಿವಿಧ ವರ್ಗಗಳ ಜನರು ನಮಗೆ ತೋರಿಸುತ್ತಿರುವ ಪ್ರೀತಿ ನೋಡಿದರೆ ಮೂಕವಿಸ್ಮಯವಾಗುತ್ತದೆ, ಏನು ಹೇಳಬೇಕೆಂದೇ ತೋಚುತ್ತಿಲ್ಲ, ಅಪ್ಪುವಿನ ಅಣ್ಣನಾಗಿ ನಾನು ಬದುಕಿದ್ದೆನಲ್ಲಾ, ನನ್ನ ಬಾಳು ಧನ್ಯವಾಗಿದೆ ಎಂದರು.

SCROLL FOR NEXT