ರಾಜ್ಯ

ಚಿಕ್ಕಬಳ್ಳಾಪುರಕ್ಕೆ ಬೊಮ್ಮಾಯಿ ಭೇಟಿ: ಸಾರ್ವಜನಿಕರು, ರೈತರ ಸಂಕಷ್ಟ ಆಲಿಸಿದ ಸಿಎಂ

Manjula VN

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ ಸುಧಾಕರ್ ಮತ್ತು ಕಂದಾಯ ಸಚಿವ ಆರ್ ಅಶೋಕ ಅವರು ಚಿಕ್ಕಬಳ್ಳಾಪುರದಲ್ಲಿ ಮಳೆ ಹಾನಿಗೀಡಾದ ವಿವಿಧ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.

ಭಾರೀ ಮಳೆಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ಸಾರ್ವಜನಿಕರು ಹಾಗೂ ರೈತರ ಅಳಲನ್ನು ಆಲಿಸಿದ ಬೊಮ್ಮಾಯಿಯವರು, ಸಮಸ್ಯೆಗಳ ಬಗೆಹರಿಸುವ ಭರವಸೆ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಪಾರ ಬೆಳೆ ನಷ್ಟ ಹಾಗೂ ಮನೆಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಕಂದಾವರ ಕೆರೆಯಿರುವೋ ಪ್ರದೇಶಕ್ಕೆ ಭೇಟಿ ನೀಡಿದರು. ಭಾರೀ ಮಳೆಗೆ ಕೆರೆ ತುಂಬಿ ಹರಿಯುತ್ತಿದ್ದು, ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ನೀರು ನಿಂತಿದ್ದು, ಮನೆಗಳಿಗೂ ನೀರು ನುಗ್ಗಿದೆ ಎಂದು ಇದೇ ವೇಳೆ ಮುಖ್ಯಮಂತ್ರಿಗಳಿಗೆ ಸಚಿವ ಸುಧಾಕರ್ ಅವರು, ವಿವರಿಸಿದರು. ಅಲ್ಲದೆ, ಕಂದಾವರ ಕೆರೆ ಮತ್ತು ಅಮಾನಿ ಗೋಪಾಲಕೃಷ್ಣ ಕೆರೆ ನಡುವೆ ರಾಜುಕಾಲುವೆ ನಿರ್ಮಿಸಲು ಹೆಚ್ಚಿನ ಹಣ ಮಂಜೂರು ಮಾಡುವಂತೆಯೂ ಮನವಿ ಮಾಡಿಕೊಂಡರು.

ಈ ವೇಳೆ ಈ ಕುರಿತು  ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿನೆ ನೀಡಿದರು.

ಬಳಿಕ ಸಿಡ್ಲಘಟ್ಟ ಆನೆಮಡುಗು ಕೆರೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳಿಗೆ ಸ್ಥಳದಲ್ಲಿದ್ದ ರೈತರು ಹಾನಿಗೊಳಗಾದ ಬೆಳೆಗಳಿ ತೋರಿಸಿ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಬಳಿಕ ಬೆಳೆ ನಷ್ಟದ ಕುರಿತು ವರದಿ ಸಲ್ಲಿಸುವಂತೆ ಕೃಷಿ ಮತ್ತು ತೋಟಗಾರಿಕೆ ಉಪ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸೂಚಿಸಿದರು.

ಅತಿವೃಷ್ಟಿಯಿಂದ 24 ಮನೆಗಳು ಸಂಪೂರ್ಣ ಹಾಗೂ 1,078 ಮನೆಗಳು ಭಾಗಶಃ ಹಾನಿಯಾಗಿದ್ದು, ಬೆಳೆ ನಷ್ಟ ಹಾಗೂ ರೈತರು, ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಆಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿಯವರು, ನೀರು ನುಗ್ಗಿ ಹಾನಿಗೀಡಾದ ಮನೆಗಳಿಗೆ 5 ಲಕ್ಷ ರೂಪಾಯಿ ಹಾಗೂ ಹಾನಿಗೊಳಗಾದ ಮನೆಗಳಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.

SCROLL FOR NEXT