ಬೆಂಗಳೂರು: ಇತ್ತೀಚಿಗೆ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಲ್ಲಿನ ಪಾರ್ಕಿಂಗ್ ಪ್ರದೇಶದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ಚಾಕು ತೋರಿಸಿ ಮೆಟ್ರೋ ಗುತ್ತಿಗೆದಾರರೊಬ್ಬರಿಂದ 16 ಸಾವಿರ ರೂ. ದರೋಡೆ ಮಾಡಿದ್ದಾನೆ. ಈ ಸಂಬಂಧ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಎಫ್ ಐಆರ್ ದಾಖಲಾಗಿದೆ. ಕಳೆದ ಗುರುವಾರದಿಂದ ಬಿಎಂಆರ್ ಸಿಎಲ್ ವೇಳಾಪಟ್ಟಿಯನ್ನು ವಿಸ್ತರಿಸಿದ ನಂತರ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಪಿಕಾಕ್ ಅಲೈಡ್ ಸರ್ವೀಸಸ್ ಗುತ್ತಿಗೆದಾರ ನೌಕರ, ಇಲ್ಲಿಗೆ ಕೊನೆಯ ರೈಲು ಬರುವುದಕ್ಕಿಂತ ಮುಂಚೆ 11-30 ರಲ್ಲಿ ಹಳೆಯ ಮದ್ರಾಸ್ ರಸ್ತೆಯ ಪಾರ್ಕಿಂಗ್ ಪ್ರದೇಶವನ್ನು ಬಂದ್ ಮಾಡಿದ್ದು, ತದನಂತರ ಎರಡು ಕಡೆಗಳಿಂದ ಗೇಟ್ ಲಾಕ್ ಮಾಡಿದ್ದಾನೆ. ಕೊನೆಯ ರೈಲಿಗಾಗಿ ಬರುವವರು ವಾಕ್ ಅಥವಾ ಆಟೋ, ಕ್ಯಾಬ್ ಮೂಲಕ ಮನೆ ತಲುಪಬೇಕಾದ ಅಗತ್ಯವಿದೆ.
ಮುಂಚಿತವಾಗಿ ಬಂದ್ ಮಾಡುವ ಕುರಿತಂತೆ ವಿವರಿಸಿದ ನೌಕರ, ಹತ್ತು ದಿನಗಳ ಹಿಂದೆ ನಡೆದ ಘಟನೆಯೊಂದರಿಂದ ನಮ್ಮ ಜೀವಕ್ಕೆ ಆತಂಕ ಉಂಟಾಗಿದೆ. ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಇಲ್ಲಿ ಆತನ ವಾಹನವನ್ನು ಪಾರ್ಕಿಂಗ್ ಮಾಡಲು ನಮ್ಮನ್ನು ಕೇಳಿದ. ಹಠಾತ್ತನೇ ಚಾಕು ತೋರಿಸಿ, 13 ಸಾವಿರ ಪಾರ್ಕಿಂಗ್ ಹಣವನ್ನು ಕೊಡುವಂತೆ ಒತ್ತಾಯಿಸಿದ. ಇದರ ಜೊತೆಗೆ ತಮ್ಮ ಬಳಿಯಿದ್ದ 3 ಸಾವಿರ ವೈಯಕ್ತಿಕ ಹಣವನ್ನು ಸಹ ಕಿತ್ತುಕೊಂಡ ಹೋದ. ಇಲ್ಲಿ ಬೆಳೆಕಿನ ವ್ಯವಸ್ಥೆ ಇಲ್ಲ, ರಾತ್ರಿಯಲ್ಲಿ ಇದು ಅಪಾಯಕಾರಿ ಪ್ರದೇಶ ಎಂದು ವಿವರಿಸಿದ್ದಾರೆ.
ಈ ಘಟನೆ ನಡೆದ ನಂತರ ಮೆಟ್ರೋ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿರುವುದಾಗಿ ಮತ್ತೋರ್ವ ನೌಕರ ಹೇಳಿದ.ಬಿಎಂಆರ್ ಸಿಎಲ್ ಹಿರಿಯ ಅಧಿಕಾರಿಗಳು ಕೆಲ ದಿನಗಳ ಹಿಂದೆ ಪಾರ್ಕಿಂಗ್ ಪ್ರದೇಶಕ್ಕೆ ಭೇಟಿ ನೀಡಿದ್ದು, ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ. ಇಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂಬುದು ತಿಳಿದುಬಂದಿದೆ.