ರಾಜ್ಯ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಜತೆ ಮಹಿಳೆ ರಂಪಾಟ, ಪ್ರಕರಣ ದಾಖಲು

Lingaraj Badiger

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈಗೆ ತೆರಳುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಬುಧವಾರ ಭದ್ರತಾ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿ ಸಿಐಎಸ್‌ಎಫ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಅವರ ವಿರುದ್ಧ ಪ್ರಕರಣ ದಾಖಲಿಸಿದೆ.

ಇನ್ನೂ ವಿಮಾನ ನಿಲ್ದಾಣದಲ್ಲಿ ಮಹಿಳೆಯ ರಂಪಾಟದಿಂದ ವಿಮಾನ ತಪ್ಪಿಸಿಕೊಂಡ ಬೆಂಗಳೂರಿನ ನವ ದಂಪತಿಗಳು ಸಹ ಆ ಮಹಿಳೆ ವಿರುದ್ಧ ವಿಮಾನ ನಿಲ್ದಾಣದಲ್ಲಿ ಲಿಖಿತ ದೂರು ನೀಡಿದ್ದು, ಮಾಲೆಗೆ ತೆರಳುವ ವಿಮಾನ ತಪ್ಪಿದ ಕಾರಣ ತಮಗೆ 3 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಗೇಟ್ ನಂ. 4 ರಲ್ಲಿ ನಿನ್ನೆ ರಾತ್ರಿ 11.50ಕ್ಕೆ ಈ ಘಟನೆ ನಡೆದಿದ್ದು, ಮುಂಬೈನ ಅಂಧೇರಿ ಪಶ್ಚಿಮದಲ್ಲಿ ನೆಲೆಸಿರುವ ನೀಕೇತ ಆಗಮ್ ಎಂಬ ಮಹಿಳೆ ಕಾಯುವ ಪ್ರಯಾಣಿಕರ ಪಟ್ಟಿಯನ್ನು ಬೈಪಾಸ್ ಮಾಡಿ ಮುಂದಕ್ಕೆ ಹೋಗಲು ಪ್ರಯತ್ನಿಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತಡೆದರು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ನೀಕೇತ ಆಗಮ್ ಅವರು 12.40ಕ್ಕೆ ಹೊರಡುವ ಇಂಡಿಗೋ ವಿಮಾನ 6E 5399 ರಲ್ಲಿ ಪ್ರಯಾಣಿಸಬೇಕಿತ್ತು.

ಸಿಐಎಸ್‌ಎಫ್ ಸಿಬ್ಬಂದಿ ಮನ್‌ದೀಪ್ ಸಿಂಗ್ ಮಹಿಳೆಯನ್ನು ತಡೆದು ನಿಮ್ಮ ಸರದಿಗಾಗಿ ಕಾಯುವಂತೆ ಕೇಳಿಕೊಂಡರು. "ಇದು ಮಹಿಳೆಯನ್ನು ಕೆರಳಿಸಿತು ಮತ್ತು ಅವರು ನಿಂದನೀಯ ಭಾಷೆ ಬಳಸಿದರು. ಅನೇಕ ಜನರ ಸಮ್ಮುಖದಲ್ಲೇ ಭದ್ರತಾ ಸಿಬ್ಬಂದಿಯನ್ನು ನಿಂದಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಿಯಾಂಕಾ - ವಿಜಯಕಾಂತ್

ಮತ್ತಿಕೆರೆ ನಿವಾಸಿಗಳಾದ ಪ್ರಿಯಾಂಕಾ ರಾಚಮಲ್ಲ ಮತ್ತು ಟೆಕ್ಸಾಸ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ವಿಜಯಕಾಂತ್ ಭೀಮಿರೆಡ್ಡಿ ಅವರು ಗೋ ಫಸ್ಟ್ ಜಿ8-4032 ವಿಮಾನದಲ್ಲಿ ಮಾಲೆಗೆ ತೆರಳುತ್ತಿದ್ದರು. ಸೆಕ್ಯುರಿಟಿ ಕ್ಲಿಯರೆನ್ಸ್ ಪಡೆಯಬೇಕಾಗಿದ್ದ ಈ ದಂಪತಿ ಮಹಿಳೆ ರಂಪಾಟದಿಂದ ವಿಮಾನ ತಪ್ಪಿಸಿಕೊಂಡರು. 

“ಆ ಮಹಿಳೆಯ ಭಯಾನಕ ವರ್ತನೆಗೆ ನಾನೇ ಪ್ರಾಥಮಿಕ ಸಾಕ್ಷಿ. ಅವರು ಹೊಲಸು ಭಾಷೆ ಬಳಸಿದರು, ಭದ್ರತಾ ಸಿಬ್ಬಂದಿಗೆ ಮಧ್ಯದ ಬೆರಳನ್ನು ತೋರಿಸಿದರು ಮತ್ತು `ಮೈ ಫೂಟ್' ಎಂದು ಹೇಳಿ ತನ್ನ ಕಾಲು ತೋರಿಸಿದರು. ವಿಮಾನ ನಿಲ್ದಾಣದ ಸಿಬ್ಬಂದಿ ಒಂದು ಮಾತನ್ನೂ ಹೇಳಲಿಲ್ಲ. ಅವರು ನಮ್ಮ ಮನವಿಯನ್ನು ನಿರ್ಲಕ್ಷಿಸಿದರು ಮತ್ತು ನಾವು ನಮ್ಮ ವಿಮಾನವನ್ನು ತಪ್ಪಿಸಿಕೊಂಡೆವು. ಸಿಐಎಸ್‌ಎಫ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಆಕೆಯನ್ನು ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ವಿಜಯಕಾಂತ್ ಅವರು ತಿಳಿಸಿದ್ದಾರೆ.

SCROLL FOR NEXT