ರಾಜ್ಯ

ಬೆಂಗಳೂರಿನಲ್ಲಿ ಐವರು ಬಾಂಗ್ಲಾ ಅಕ್ರಮ ವಲಸಿಗರು ಸಿಸಿಬಿ ವಶಕ್ಕೆ

Srinivasamurthy VN

ಬೆಂಗಳೂರು: ಬೆಂಗಳೂರಿನಲ್ಲಿ ಐವರು ಅಕ್ರಮ ವಲಸಿಗರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 'ಇಂದು ಸಿಸಿಬಿ ಪೊಲೀಸರು ಐದು ಜನ ಬಾಂಗ್ಲಾ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ವಲಸಿಗರ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಿದೆ. ಅಕ್ರಮ ವಲಸಿಗರ ಪಟ್ಟಿ ಮಾಡಲು ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಲಾಗಿದೆ. ಅವರ ಪಟ್ಟಿ ಮಾಡಿ ಅವರನ್ನು ಡಿಟೆಂಷನ್ ಸೆಂಟರ್ ತಂದು ಹಾಕಲು ಸೂಚನೆ ನೀಡಲಾಗಿದೆ. ಅಕ್ರಮ ವಲಸಿಗರು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ ಎಂದು ತಿಳಿಸಿದರು.

ಅಕ್ರಮ ವಲಸೆ ಕುರಿತು ತನಿಖೆ, ಅಕ್ರಮ ದಾಖಲೆ ಕೊಡಿಸುವ ಜಾಲವೇ ಇದೆ
ಅಂತೆಯೇ ಅವರು ಹೇಗೆ ಬಂದಿದ್ದಾರೆ, ಯಾರು ಕರೆದುಕೊಂಡು ಬಂದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅಕ್ರಮ ವಲಸಿಗರು ಕಟ್ಟಡ ಕೆಲಸ,‌ ಕಾಫಿ ಎಸ್ಟೇಟ್ ಕೆಲಸಕ್ಕೆ ಬಂದಿದ್ದಾರೆ. ಅವರನ್ನು ಯಾರು ಕರೆದುಕೊಂಡು ಬರುತ್ತಾರೆ ಎಂಬುದನ್ನು ತಿಳಿಯಲು ಈ ಮೂಲಕ್ಕೆ ಕೈಹಾಕಿ ತನಿಖೆ ಮಾಡಲಾಗುವುದು. ಅವರನ್ನು ವಶಕ್ಕೆ ಪಡೆದು ಬಾಯಿ ಬಿಡಿಸುವ ಕೆಲಸ ಆಗಲಿದೆ. ಅಕ್ರಮ ವಲಸಿಗರಿಗೆ ದಾಖಲೆ ಕೊಡಿಸುವ ಜಾಲವೇ ಇದೆ. ಅವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸಿಗುತ್ತದೆ ಆದರೆ ನಮ್ಮ ಬಡವರಿಗೆ ಸಿಗುತ್ತಿಲ್ಲ. ಕರ್ನಾಟಕದಲ್ಲಿ ಅಲ್ಲ, ಅಸ್ಸಾಂ ಭಾಗದಲ್ಲಿ ಇಂತಹ ಜಾಲ ಇದೆ. ಕೇಂದ್ರಕ್ಕೆ ಹಾಗೂ ಆಯಾ ರಾಜ್ಯಕ್ಕೆ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು: ಸಿಸಿಬಿ ಪೊಲೀಸರಿಂದ 38 ಅಕ್ರಮ ವಲಸಿಗರು ವಶಕ್ಕೆ, ಮಾದಕ ವಸ್ತುಗಳು ಜಪ್ತಿ
 
ಉದ್ದೇಶಪೂರ್ವಕವಾಗಿ ಪೊಲೀಸ್ ಕೇಸ್ ಹಾಕಿಸಿಕೊಳ್ಳುತ್ತಾರೆ
ಅಕ್ರಮ ವಲಸಿಗರು ಬೇಕೆಂದೇ ಸಣ್ಣ ಪುಟ್ಟ ಕೇಸ್‌ಗಳನ್ನು ಹಾಕಿಸಿಕೊಳ್ಳುತ್ತಾರೆ. ಪ್ರಕರಣ ಮುಗಿಯುವವರೆಗೂ ಅವರು ನಗರ ಬಿಟ್ಟು ಹೊರಗೆ ಹೋಗುವಂತೆ ಆಗುವುದಿಲ್ಲ. ಹೀಗೆ ಅವರು ಇಲ್ಲಿಯೇ ನೆಲೆಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರನ್ನು ಹೊರಗೆ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ವೀಸಾ ಅವಧಿ ಮುಗಿದರೂ ಇಲ್ಲಿಯೇ ಇರುವವರನ್ನು ಬಂಧಿಸಬೇಕು, ಇಲ್ಲವೇ ಹೊರ ಹಾಕಬೇಕು. ಬಾಂಗ್ಲಾದೇಶದ ಅಕ್ರಮ ವಲಸಿಗರು ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿದ್ದಾರೆ. ಈ ವಲಸಿಗರು ಕಸ ವಿಲೇವಾರಿ ಘಟಕಗಳಲ್ಲಿ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ. ಅವರಿಗೆ ತ್ಯಾಜ್ಯ ಗುತ್ತಿಗೆದಾರರೇ ಬೆಂಬಲವಾಗಿದ್ದಾರೆ. ಕಸ ಸಂಸ್ಕರಣೆಗಾಗಿ ಪ್ರತಿ ವರ್ಷವೂ ಅವರನ್ನು ಕರೆಸಿಕೊಳ್ಳುತ್ತಿದ್ದಾರೆ. ಭೂ ಮಾಲೀಕರ ಜತೆಗೆ ಮಾತನಾಡಿ ಅವರು ಶೆಡ್ ನಿರ್ಮಿಸಿಕೊಳ್ಳಲು ನೆರವು ನೀಡುತ್ತಿದ್ದಾರೆ. ಕಸ ವಿಲೇವಾರಿ ಮಾಡುವವರು ವಸತಿ ಸಂಕೀರ್ಣಗಳ ಸಮೀಪ ಅವುಗಳನ್ನು ಸುರಿಯುವ, ಬೆಂಇ ಹಚ್ಚಿ ಸುಡುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಕೆರೆ ರಾಜಕಾಲುವೆಗಳಿಗೂ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ ಎಂಬ ಆರೋಪವಿದೆ ಎಂದು ಹೇಳಿದರು.

ಅಕ್ರಮ ವಲಸೆ ಕಾನೂನಿನಡಿಯಲ್ಲಿ ಪ್ರಕರಣ: ಸಂದೀಪ್ ಪಾಟಿಲ್
ಇನ್ನು ಇದೇ ವಿಚಾರವಾಗಿ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ (ಅಪರಾಧ ವಿಭಾಗ) ಸಂದೀಪ್ ಪಾಟೀಲ್ ಅವರು, 'ಕಾಡುಗೋಡಿಯಲ್ಲಿ ಐವರು ಅಕ್ರಮ ಬಾಂಗ್ಲಾದೇಶ ಪ್ರಜೆಗಳನ್ನು ಬಂಧಿಸಲಾಗಿದೆ. ವಿದೇಶಿಗರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
 

SCROLL FOR NEXT