ರಾಜ್ಯ

ಸುದ್ದಿವಾಹಿನಿ ಚರ್ಚೆ ವೇಳೆ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಳ್ಳಾಲ್ ಗೆ ಬೆದರಿಕೆ: ಸಿದ್ದರಾಮಯ್ಯ ಖಂಡನೆ, ಬಂಧನಕ್ಕೆ ಒತ್ತಾಯ

Nagaraja AB

ಬೆಂಗಳೂರು: ಮಂಗಳೂರಿನ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ನೇರ ಚರ್ಚೆ ವೇಳೆ ಕಾಂಗ್ರೆಸ್ ವಕ್ತಾರೆ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆಯ ಬೆದರಿಕೆಯೊಡ್ಡಲಾಗಿದೆ. ಇದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಖಂಡಿಸಿದ್ದಾರೆ. 

ಕೂಡಲೇ ಸಂಘ ಪರಿವಾರಕ್ಕೆ ಸೇರಿದವರೆನ್ನೆನ್ನಲಾದ ಈ ದುಷ್ಕರ್ಮಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸುದ್ದಿವಾಹನಿಯೊಂದರಲ್ಲಿ ಮಂಗಳೂರಿನ ಸುರತ್ಕಲ್ ನಲ್ಲಿ ವಿದ್ಯಾರ್ಥಿಗಳ ಮೇಲಿನ ನೈತಿಕ ಪೊಲೀಸ್ ಗಿರಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಫೋನ್ ಮಾಡಿ ಲಾವಣ್ಯ ಅವರಲ್ಲಿ ಮಾತನಾಡಬೇಕೆಂದು ನಿರೂಪಕರಲ್ಲಿ ಕೇಳಿಕೊಳ್ಳುತ್ತಾನೆ.

ಅದರಂತೆ ಲಾವಣ್ಯ ಬಳ್ಳಾಲ್ ಅವರಿಗೆ ಪ್ರಶ್ನೆ ಮಾಡಿದ ವ್ಯಕ್ತಿ' ನೀವು ಆರ್ ಎಸ್ ಎಸ್, ಬಜರಂಗದಳದ ಬಗ್ಗೆ ಹೇಗೆ ಹಗುರವಾಗಿ ಮಾತನಾಡುತ್ತೀರಿ. ನಿಮ್ಮ ಮಗಳನ್ನು ಕಾರಿನಲ್ಲಿ ಕೂರಿಸಿ ನೀವು ಆರ್ ಎಸ್ ಎಸ್  ಬಗ್ಗೆ ಮಾತನಾಡಿದ್ದೀರಲ್ಲ, ನೀವು ಹೊರಗಡೆ ಬಂದು ಮಾತನಾಡಿ, ನಾವು ನಿಮಗೆ ಸಾರ್ವಜನಿಕವಾಗಿಯೇ ಹಲ್ಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ. ಈ ವೇಳೆ ನಿರೂಪಕ ಸೇರಿದಂತೆ ಚರ್ಚೆಯಲ್ಲಿ ಭಾಗವಹಿಸಿದವರು ಆತನ ಹೇಳಿಕೆಯನ್ನು ಖಂಡಿಸಿದ್ದಾರೆ. 

ಈ ಕುರಿತಂತೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೂಡಲೇ ಸಂಘ ಪರಿವಾರಕ್ಕೆ ಸೇರಿದವರೆನ್ನೆನ್ನಲಾದ ಈ ದುಷ್ಕರ್ಮಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ.

SCROLL FOR NEXT