ರಾಜ್ಯ

ನಗರದ ರಸ್ತೆ ಗುಂಡಿ ಮುಚ್ಚಲು ಇಟ್ಟಿದ್ದ 20 ಸಾವಿರ ಕೋಟಿ ರೂ. ಎಲ್ಲಿ ಹೋಯಿತು?: ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆ

Manjula VN

ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಜನ ಸಾಯುತ್ತಿದ್ದಾರೆ. ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು 20 ಸಾವಿರ ಕೋಟಿ ಹಣ ಖರ್ಚು ಮಾಡಿದ್ದೇವೆ ಎಂದು ಸದನದಲ್ಲಿ ಮುಖ್ಯಮಂತ್ರಿ ಹೇಳಿದ್ದರು. ಆ ಹಣ ಎಲ್ಲಿ ಹೋಯಿತು? ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರು ಸೋಮವಾರ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಳಪೆ ನಿರ್ವಹಣೆಯಿಂದಾಗಿ ನಗರದ ರಸ್ತೆಗಳು ಹಾಳಾಗಿವೆ. ರಸ್ತೆಗಳ ಮೇಲೆ ನೀರು ನದಿಯಂತೆ ಹರಿದಿದೆ. ರಸ್ತೆಗಳ ಗುಂಡಿ ಮುಚ್ಚಲು ತೆಗೆದಿಟ್ಟಿದ್ದ ಹಣ ಎಲ್ಲಿ ಹೋಯಿತು? ಅಷ್ಟು ಹಣವನ್ನು ಯಾವುದಕ್ಕೆ ಬಳಕೆ ಮಾಡಿಕೊಂಡರು. ಅಷ್ಟು ಹಣ ವೆಚ್ಚ ಆಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದಿದೆ. ಅದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯೆ ಕೊಟ್ಟಿದ್ದರು. ಇದಕ್ಕೆ ಜನರಿಗೆ ಉತ್ತರ ಬೇಕಿದೆ ಎಂದು ಅವರು ಕೇಳಿದ್ದಾರೆ. 

ಇದನ್ನೂ ಓದಿ: ಪಕ್ಷ ತೊರೆಯುವ ಬಗ್ಗೆ ಕೆಲ ಜೆಡಿಎಸ್ ಶಾಸಕರ ಬಹಿರಂಗ ಹೇಳಿಕೆ: ಎಚ್ ಡಿಕೆ ತೀವ್ರ ಅಸಮಾಧಾನ
 
ಭಾನುವಾರವಷ್ಟೇ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನೂರಾರು ಕೋಟಿ ವೆಚ್ಚದ ಯೋಜನೆಗಳಿಗೆ ಮುಖ್ಯಮಂತ್ರಿ, ಸಚಿವರು ಚಾಲನೆ ನೀಡಿದ್ದರು. ಆದರೆ ಸಂಜೆ ಮಳೆ ಬಂದು ಆ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯನ್ನು ಬೆತ್ತಲು ಮಾಡಿತು. 

ಮನೆಗಳಿಗೆ ನೀರು ನುಗ್ಗಿ ಜನ ಇಡೀ ರಾತ್ರಿ ಜಾಗರಣೆ ಮಾಡಿದರು. ಮಳೆ ನೀರಿನಲ್ಲಿ ಹಸು, ಕುರಿಗಳು ಕೊಚ್ಚಿಕೊಂಡು ಹೋಗಿವೆ. ಇವರು ಯಾವ ರೀತಿಯ ಅಭಿವೃದ್ಧಿಯನ್ನು ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ನಾನು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಉಸ್ತುವಾರಿ ಕಾಂಗ್ರೆಸ್ ಕೈಲಿ ಇತ್ತು. ನಾನು ನಗರದ ಬಗ್ಗೆ ಒಂದು ಸಭೆ ಮಾಡಬೇಕಾದರೂ ಕಾಂಗ್ರೆಸ್ ನಾಯಕರ ಅಪ್ಪಣೆ ಬೇಕಾಗಿತ್ತು. ಆದರೆ ಅವರು ಒಪ್ಪುತ್ತಿರಲಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಷ್ಟು ದಿನ ಬೆಂಗಳೂರು ಪ್ರಗತಿ ಪರಿಶೀಲನೆ ಸಭೆ ಮಾಡುವ ಹಾಗಿರಲಿಲ್ಲ. ಇದು ಸತ್ಯ ಸಂಗತಿ ಎಂದು ವಿವರಿಸಿದರು.

SCROLL FOR NEXT