ರಾಜ್ಯ

ಮಂಗಳೂರಿನಲ್ಲಿ ಮತ್ತೆ 'ನೈತಿಕ ಪೊಲೀಸ್'ಗಿರಿ: ಇಬ್ಬರು ಬಜರಂಗದಳದ ಕಾರ್ಯಕರ್ತರ ಬಂಧನ

Lingaraj Badiger

ಮಂಗಳೂರು: ಮಂಗಳೂರಿನ ಕದ್ರಿಯಲ್ಲಿ 'ನೈತಿಕ ಪೊಲೀಸ್'ಗಿರಿ ನಡೆಸಿದ ಆರೋಪದ ಮೇಲೆ ಗುರುವಾರ ಇಬ್ಬರು ಬಜರಂಗದಳದ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಬಂಧಿತರನ್ನು ಜಯಪ್ರಕಾಶ್ ಮತ್ತು ಪೃಥ್ವಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕ ಮುಹಮ್ಮದ್ ಪಿವಿ ಸಲ್ಲಿಸಿದ ದೂರಿನ ಪ್ರಕಾರ, ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮುಹಮ್ಮದ್ ಪಿವಿ ಮತ್ತು ಆತನ ಸ್ನೇಹಿತ ಪ್ರಣವ್ ಕಂಕನಾಡಿಯಲ್ಲಿ ರಾತ್ರಿ ಊಟ ಮಾಡಿ, ಲಾಲ್‌ಬಾಗ್‌ನಲ್ಲಿರುವ ತಮ್ಮ ಕೊಠಡಿಯ ಕಡೆಗೆ ಹೋಗುತ್ತಿದ್ದಾಗ ಅವರು ಬೆಂದೂರ್‌ವೆಲ್ ಬಳಿ ಒಬ್ಬ ಮಹಿಳಾ ಸ್ನೇಹಿತೆಯನ್ನು ಭೇಟಿ ಮಾಡುತ್ತಾರೆ. ಈ ವೇಳೆ ತಮ್ಮ ಸಹಪಾಠಿಗಳನ್ನು ಭೇಟಿ ಮಾಡಿ ಪರಸ್ಪರ ಮಾತನಾಡುತ್ತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ತನ್ನ ಹೆಸರು ಕೇಳಿದರು. ತಾನು ಮುಸ್ಲಿಂ ಎಂದು ತಿಳಿದಾಗ ಅವರು ಹಿಂದೂ ಹುಡುಗಿಯರೊಂದಿಗೆ ಏಕೆ ಮಾತನಾಡುತ್ತೀಯಾ ಎಂದು ಪ್ರಶ್ನಿಸಿದರು ಮತ್ತು ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.

ಆ ಇಬ್ಬರು ಆರೋಪಿಗಳನ್ನು  ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

SCROLL FOR NEXT