ರಾಜ್ಯ

ಕಸ ಎಸೆಯುವವರನ್ನು ಹಿಡಿಯಿರಿ, 5 ಸಾವಿರ ರೂ. ಬಹುಮಾನ ಪಡೆಯಿರಿ: ಬಿದರಹಳ್ಳಿ ಗ್ರಾಮ ಪಂಚಾಯಿತಿ

Lingaraj Badiger

ಬೆಂಗಳೂರು: ರಸ್ತೆ ಬದಿಯಲ್ಲಿ ಕಸ ಎಸೆಯುವವರ ಮೇಲೆ ಕಣ್ಣಿಡಲು ಮತ್ತು ಅವರಿಗೆ ದಂಡ ವಿಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾರ್ಷಲ್‌ಗಳನ್ನು ನಿಯೋಜನೆ ಮಾಡಿದ್ದರೆ, ಹೊರವಲಯದಲ್ಲಿರುವ ಹಳ್ಳಿಗಳನ್ನು ನೋಡಿಕೊಳ್ಳಲು ಯಾರೂ ಇಲ್ಲ.  ಆದರೆ ಬಿದರಹಳ್ಳಿ ಗ್ರಾಮ ಪಂಚಾಯಿತಿಯೂ ತನ್ನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರಸ್ತೆಬದಿಯಲ್ಲಿ ತ್ಯಾಜ್ಯ ಎಸೆಯುವುದನ್ನು ನಿರ್ಬಂಧಿಸಲು ನಿರ್ಧರಿಸಿದೆ.

ರಸ್ತೆ ಬದಿಯಲ್ಲಿ ಅಕ್ರಮವಾಗಿ ಕಸ ಎಸೆಯುವ ಬಗ್ಗೆ ಯಾರಾದರೂ ಮಾಹಿತಿ ನೀಡಿದರೆ ಅವರಿಗೆ 5 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ಬಿದರಹಳ್ಳಿ ಗ್ರಾಮ ಪಂಚಾಯಿತಿ ಘೋಷಿಸಿದೆ.

ಬಿದರಹಳ್ಳಿ ಗ್ರಾಮ ಪಂಚಾಯಿತಿ ಸುಮಾರು 50,000 ಜನಸಂಖ್ಯೆ ಹೊಂದಿರುವ ಎಂಟು ಗ್ರಾಮಗಳನ್ನು ಒಳಗೊಂಡಿದೆ. ಬೆಂಗಳೂರಿನ ಕೆಆರ್ ಪುರಂ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿದ್ದರೂ, ಇದು ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿದೆ.

ನಾವು ಹಲವು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಕಿಟಗನೂರು-ಬಿದರಹಳ್ಳಿ ರಸ್ತೆಯಲ್ಲಿ ರಾತ್ರಿಯ ಸಮಯದಲ್ಲಿ ನಗರದಿಂದ ಕಸ ತಂದು ಅಕ್ರಮವಾಗಿ ರಸ್ತೆ ಬದಿಯಲ್ಲಿ ಸುರಿಯಲಾಗುತ್ತದೆ ಎಂದು ಮೊದಲ ಬಾರಿ ಸದಸ್ಯ ಮತ್ತು ಪಂಚಾಯಿತಿ ಅಧ್ಯಕ್ಷರಾಗಿರುವ ಬಿ ವಿ ವರುಣ್ ಅವರು ಹೇಳಿದ್ದಾರೆ.

"ವಾಸ್ತವವಾಗಿ, ನಾವು ರಾತ್ರಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದಾಗ, ಯಾವುದೇ ಕಸವನ್ನು ಸುರಿಯಲಾಗುವುದಿಲ್ಲ. ಆದರೆ ಅವರು ಇಲ್ಲದಿದ್ದಾಗ, ಕಸವನ್ನು ಸುರಿಯಲಾಗುತ್ತದೆ, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.

ಸುಮಾರು ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮನೆಗಳಿಲ್ಲ. ಹೀಗಾಗಿ ಅಲ್ಲಿ ಯಾರು ಕಸ ಎಸೆಯುತ್ತಿದ್ದಾರೆ ಎಂದು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಸ ಎಸೆಯುವವರನ್ನು ಹಿಡಿದವರಿಗೆ 5000 ರೂ ನಗದು ಬಹುಮಾನ ನೀಡಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷರು ಹೇಳಿದ್ದಾರೆ.

SCROLL FOR NEXT