ರಾಜ್ಯ

ಸತತ ಮಳೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ಟರ್ಮಿನಲ್ ಗೆ ನುಗ್ಗಿದ ನೀರು; ಟ್ರ್ಯಾಕ್ಟರ್ ಮೊರೆ ಹೋದ ಪ್ರಯಾಣಿಕರು!

Sumana Upadhyaya

ಬೆಂಗಳೂರು: ಕಳೆದ ಕೆಲ ದಿನಗಳಿಂದ ಹಗಲು-ರಾತ್ರಿ ಸುರಿಯುತ್ತಿರುವ ಭಾರೀ ಮಳೆಗೆ ರಾಜಧಾನಿ ಬೆಂಗಳೂರಿನ ಅಲ್ಲಲ್ಲಿ ಸಾಕಷ್ಟು ಅವಾಂತರಗಳಾಗಿವೆ.ಹಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿವೆ. 

ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿನ ಹೊರವಲಯ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭಾಗಶಃ ಪ್ರವಾಹಕ್ಕೀಡಾಗಿದೆ. ನಿಲ್ದಾಣದೊಳಗೆ ನೀರು ನುಗ್ಗಿ ಪ್ರಯಾಣಿಕರು ಹೊರಹೋಗಲು ಮತ್ತು ಒಳಬರಲು ಟ್ರ್ಯಾಕ್ಟರ್ ಬಳಸಿದ್ದು ಅದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. 

ವಿಮಾನ ಸೇವೆಗೂ ನಿನ್ನೆಯ ಮಳೆಯಿಂದ ವ್ಯತ್ಯಯವುಂಟಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಅವ್ಯಾಹತವಾಗಿ ನೀರು ನುಗ್ಗಿ ಪ್ರಯಾಣಿಕರು ಸ್ತಬ್ಧರಾದರು. 

ಹವಾಮಾನ ವೈಪರೀತ್ಯದಿಂದಾಗಿ ಸುಮಾರು 11 ವಿಮಾನಗಳು ಹೊರಡುವುದಕ್ಕೆ ವಿಳಂಬವಾಯಿತು, ಇನ್ನು ನಿಲ್ದಾಣಕ್ಕೆ ಬರುವ ವಿಮಾನಗಳ ಆಗಮನಕ್ಕೂ ತಡವಾಯಿತು. ಪ್ರವಾಹಪೀಡಿತ ರಸ್ತೆಗಳಲ್ಲಿ ಕ್ಯಾಬ್ ಚಾಲಕರು ವಾಹನ ಚಲಾಯಿಸಲು ಹಿಂದೇಟು ಹಾಕಿದರು. 

ಭಾರೀ ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಉತ್ತರ ಒಳನಾಡಿನ ಕರ್ನಾಟಕ ಮತ್ತು ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಕೋಲಾರ, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕರ್ನಾಟಕದ ದಕ್ಷಿಣ ಒಳಭಾಗದಲ್ಲಿರುವ ತುಮಕೂರು, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮುಂದಿನ ಒಂದೆರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

SCROLL FOR NEXT