ಬೆಂಗಳೂರು: ರಾಜ್ಯದಲ್ಲಿನ ಅಧಿಕೃತ ಮತ್ತು ಅನಧಿಕೃತ ಕ್ರಿಶ್ಚಿಯನ್ ಮಿಷನರಿಗಳ ಸಮೀಕ್ಷೆ ನಡೆಸುವಂತೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ನೀಡಿರುವ ಸೂಚನೆಗೆ ಚರ್ಚೆಗಳು ಅಸಮಾಧಾನ ವ್ಯಕ್ತಪಡಿಸಿವೆ.
"ಗೌರವಾನ್ವಿತ ಮುಖ್ಯಮಂತ್ರಿಯಾದ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ನಾವು ವಿಶಾಲ ಮನೋಭಾವದ ಮತ್ತು ಪ್ರಬುದ್ಧ ವ್ಯಕ್ತಿ ಎಂದು ಪರಿಗಣಿಸಿದ್ದೇವೆ. ಆದರೆ ಮೂಲಭೂತವಾದಿ ಗುಂಪುಗಳ ಒತ್ತಡಕ್ಕೆ ಮಣಿದಿರುವುದು ನಮಗೆ ಬೇಸರವನ್ನು ತರಿಸಿದೆ. ನಾವು ಸೌಹಾರ್ದತೆ ಮತ್ತು ಶಾಂತಿ ಬಯಸುತ್ತೇವೆ ಎಂದು ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೊ ಶುಕ್ರವಾರ ಹೇಳಿದ್ದಾರೆ.
ಇದನ್ನೂ ಓದಿ: ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಲು ಕ್ರಮ: ಕ್ರೈಸ್ತ ಮಿಷನರಿಗಳ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ
ಕ್ರಿಶ್ಚಿಯನ್ ಮಿಷನರಿಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಕೇಂದ್ರಗಳನ್ನು ಸರ್ಕಾರ ಎಣಿಕೆ ಮಾಡಲಿ. ಅದು ರಾಷ್ಟ್ರ ನಿರ್ಮಾಣಕ್ಕೆ ಕ್ರಿಶ್ಚಿಯನ್ ಸಮುದಾಯದ ನೀಡುತ್ತಿರುವ ಸೇವೆಯನ್ನು ತಿಳಿಸುತ್ತದೆ. ಈ ಸ್ಥಳಗಳು ಮತ್ತು ಸಂಸ್ಥೆಗಳಲ್ಲಿ ಎಷ್ಟು ಜನರನ್ನು ಮತಾಂತರ ಮಾಡಲಾಗಿದೆ? ಕೆಲವರು ಆರೋಪಿಸಿದಂತೆ, ಕ್ರಿಶ್ಚಿಯನ್ನರು ಮನಬಂದಂತೆ ಮತಾಂತರಗೊಳ್ಳುತ್ತಿದ್ದರೆ, ಇತರರಿಗೆ ಹೋಲಿಸಿದರೆ ಕ್ರೈಸ್ತ ಜನಸಂಖ್ಯೆಯ ಶೇಕಡಾವಾರು ಏಕೆ ನಿಯಮಿತವಾಗಿ ಕಡಿಮೆಯಾಗುತ್ತಿದೆ? ಚರ್ಚ್ ಬಲವಂತದ, ಮೋಸದ ಮತ್ತು ಪ್ರೋತ್ಸಾಹಿತ ಮತಾಂತರಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಬುಧವಾರ ಮಾತನಾಡಿದ್ದ ಮುಖ್ಯಮಂತ್ರಿ ಬೊಮ್ಮಾಯಿಯವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಮತಾಂತರವನ್ನು ನಿಷೇಧಿಸುವ ಕಾಯ್ದೆ ಜಾರಿಗೆ ತರುತ್ತೇವೆ. ಅದಕ್ಕಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಗಳನ್ನು ಅಧ್ಯಯನ ಮಾಡುತ್ತಿದ್ದು, ಶೀಘ್ರದಲ್ಲೇ ನಮ್ಮ ರಾಜ್ಯದಲ್ಲಿ ಸೂಕ್ತ ಕಾಯ್ದೆ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದರು.