ವಿಜಯಪುರ: ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಅದರಲ್ಲಿದ್ದ ಒಂದೇ ಕುಟುಂಬದ ನಾಲ್ವರು ಹಾಗೂ ಲಾರಿ ಚಾಲಕ ಸೇರಿ ಐವರು ಮೃತಪಟ್ಟಿರುವ ದಾರುಣ ಘಟನೆ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ನಗರದ ಸಾಯಿಪಾರ್ಕ್ ನಿವಾಸಿ, ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಮಂಜುನಾಥ ಮುಂಡೇವಾಡಿ (42), ಪತ್ನಿ ಸಾವಿತ್ರಿ (37), ಪುತ್ರಿ ಆರಾಧ್ಯಾ (08) ಆಯುಕ್ತಾ (4) ಹಾಗೂ ಕೆಟ್ಟು ನಿಂತಿದ್ದ ಲಾರಿ ರಿಪೇರಿ ಮಾಡುತ್ತಿದ್ದ ಮಹಾರಾಷ್ಟ್ರ ಬೀಡ್ ಜಿಲ್ಲೆಯ ಲಾರಿ ಚಾಲಕ ಥಾಯಿರ್ ಪಠಾಣ (33) ಮೃತ ದುರ್ದೈವಿಗಳು.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪುತ್ರರಾದ ಅಪ್ಪುಗೌಡ ಹಾಗೂ ಆಯುಕ್ತಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಯುಕ್ತಾ ಕೊನೆಯುಸಿರೆಳೆದಿದ್ದಾಳೆ. ಇವಳೊಂದಿಗೆ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದಂತಾಯಿತು.
ಮಂಜುನಾಥ ಕುಟುಂಬ ಸದಸ್ಯರು ಪ್ರವಾಸಕ್ಕೆ ಗೋವಾಕ್ಕೆ ತೆರಳಿದ್ದರು. ಗೋವಾದಿಂದ ಬುಧವಾರ ಬೆಳಗ್ಗೆ ವಿಜಯಪುರಕ್ಕೆ ಮರಳುತ್ತಿದ್ದರು. ನಿದ್ರೆಯಿಲ್ಲದ್ದರಿಂದಾಗಿ ಕಾರು ಚಲಾಯಿಸುತ್ತಿದ್ದ ಮಂಜುನಾಥ ಮುಂಡೇವಾಡಿ ವಿಜಯಪುರ ಸಮೀಪಿಸುತ್ತಿದ್ದಂತೆಯೇ ನಿದ್ರೆಯ ಮಂಪರಿಯಲ್ಲಿ ಬಲ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ರಭಸದಿಂದ ಡಿಕ್ಕಿ ಹೊಡೆಸಿದ್ದರಿಂದ, ಕಾರು ಲಾರಿಯಡಿ ಸಿಲುಕಿ ನಜ್ಜು- ಗುಜ್ಜಾಗಿದೆ. ಮಾತ್ರವಲ್ಲ, ಲಾರಿ ದುರಸ್ತಿ ಮಾಡುತ್ತಿದ್ದ ಅಮಾಯಕ ಚಾಲಕನೂ ಕಾರಿನ ರಭಸಕ್ಕೆ ಸ್ಥಳದಲ್ಲೇ ಅಸುನೀಗಿದ್ದಾನೆ ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.