ರಾಜ್ಯ

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ.3ರಷ್ಟು ಹೆಚ್ಚಳ

Sumana Upadhyaya

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಮುನ್ನ ರಾಜ್ಯ ಸರ್ಕಾರ ತನ್ನ ನೌಕರರಿಗೆ ಸಿಹಿಸುದ್ದಿಯನ್ನು ನೀಡಿದೆ. ಅವರ ತುಟ್ಟಿಭತ್ಯೆ (ಡಿಎ)ಯನ್ನು ಈಗಿರುವ ಶೇಕಡಾ 21.5ರಿಂದ ಶೇಕಡಾ 24.5ಕ್ಕೆ ಹೆಚ್ಚಿಸಲಾಗಿದೆ. ಇದು ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. 

ಕೇವಲ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ ಪಿಂಚಣಿದಾರರು, ಮತ್ತು ಕುಟುಂಬ ಸದಸ್ಯ ಪಿಂಚಣಿದಾರರಿಗೂ ಅನ್ವಯವಾಗಲಿದೆ. ನೌಕರರ ತುಟ್ಟಿಭತ್ಯೆ ಹೆಚ್ಚಳವನ್ನು ನಗದು ರೂಪದಲ್ಲಿ ನೀಡಲಾಗುತ್ತದೆ. 

ರಾಜ್ಯ ಹಣಕಾಸು ಇಲಾಖೆಯ (ಸರ್ವಿಸ್-2) ಉಪ ಕಾರ್ಯದರ್ಶಿಗಳು ನಿನ್ನೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಎಲ್ಲಾ ಖಾಯಂ ನೌಕರರಿಗೆ, ಜಿಲ್ಲಾ ಪಂಚಾಯತ್, ನಿಯಮಿತ ವೇತನ ಪಡೆಯುತ್ತಿರುವ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಖಾಯಂ ನೌಕರರಿಗೆ ಈ ತುಟ್ಟಿಭತ್ಯೆ ಹೆಚ್ಚಳ ಅನ್ವಯವಾಗಲಿದೆ. ಯುಜಿಸಿ/ಎಐಸಿಟಿಇ/ಐಸಿಎಆರ್  ನೌಕರರಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಆದೇಶವನ್ನು ಹೊರಡಿಸಲಾಗುತ್ತದೆ.

ಇದು ರಾಜ್ಯ ಸರ್ಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ಅನ್ವಯಿಸುತ್ತದೆ, ಅವರ ಪಿಂಚಣಿ/ಕುಟುಂಬ ಪಿಂಚಣಿಯನ್ನು ರಾಜ್ಯದ ಏಕೀಕೃತ ನಿಧಿಯಿಂದ ಪಾವತಿಸಲಾಗುತ್ತದೆ ಮತ್ತು ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರಿಗೆ ಸಹ ತುಟ್ಟಿಭತ್ಯೆ ನೀಡಲಾಗುತ್ತದೆ. ಇದನ್ನು ಯಾವುದೇ ಉದ್ದೇಶಕ್ಕಾಗಿ ವೇತನ ಎಂದು ಪರಿಗಣಿಸಲಾಗುವುದಿಲ್ಲ ಎಂದು ಆದೇಶವು ಹೇಳಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಜುಲೈ 1 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಶೇ 28 ರಿಂದ 31 ಕ್ಕೆ ಹೆಚ್ಚಿಸಿತ್ತು.

SCROLL FOR NEXT