ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಾಲೆಯ ಕಿಕ್ಕಿರಿದ ಲಸಿಕೆ ಶಿಬಿರದಲ್ಲಿ 19 ವರ್ಷದ ದಿನಗೂಲಿ ಕೆಲಸಗಾರನಿಗೆ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ.
ಒಟ್ಟಿಗೆ ಎರಡು ಡೋಸ್ ಲಸಿಕೆ ಪಡೆದ ಯುವಕನನ್ನು ಆರೋಗ್ಯ ಕೇಂದ್ರದಲ್ಲಿ ಮೂರು ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಯಿತು. ನಂತರ ಮನೆಗೆ ಕಳುಹಿಸಲಾಯಿತು.
ಆರೋಗ್ಯ ಅಧಿಕಾರಿಗಳು ಬುಧವಾರದಿಂದ ಯುವಕನ ಮನೆಯಲ್ಲಿಯೇ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಮತ್ತು ಗುರುವಾರ ತಡರಾತ್ರಿಯವರೆಗೆ ಯಾವುದೇ ಪ್ರತಿಕೂಲ ಪರಿಣಾಮ ವರದಿಯಾಗಿಲ್ಲ ಎಂದು ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ ಬಿ ನಂದಕುಮಾರ್ ಅವರು ತಿಳಿಸಿದ್ದಾರೆ.
ತಾಲ್ಲೂಕಿನ ಕೂಟೇಲು ಮೂಲದ ಕೆಬಿ ಅರುಣ್ ಎಂಬ ದಿನಗೂಲಿ ಕೆಲಸಗಾರ ಬುಧವಾರ ಸುಳ್ಯ ತಾಲೂಕಿನ ದುಗ್ಗಲಕಡ ಪ್ರೌಢ ಶಾಲೆಯಲ್ಲಿ ಲಸಿಕೆ ಶಿಬಿರಕ್ಕೆ ಹೋಗಿದ್ದರು. ಅಲ್ಲಿ ಆರೋಗ್ಯ ಸಹಾಯಕರು ಅವರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಿದರು. ಸ್ವಲ್ಪ ಸಮಯ ಕೋಣೆಯಲ್ಲಿ ಕಾಯುತ್ತಿದ್ದ ಯುವಕನಿಗೆ ಈಗಾಗಲೇ ಲಸಿಕೆ ನೀಡಿದ್ದು ತಿಳಿಯದೆ ಅದೇ ಸಿಬ್ಬಂದಿ ಎರಡನೇ ಡೋಸ್ ನೀಡಿದ್ದಾರೆ.
ಲಸಿಕೆ ಹಾಕಿದ ನಂತರ ಯುವಕರು ಕೊಠಡಿಯನ್ನು ಬಿಡದ ಕಾರಣ ಗೊಂದಲ ಉಂಟಾಯಿತು ಎಂದು ಡಾ. ನಂದಕುಮಾರ್ ಹೇಳಿದರು.
ಯುವಕ ಪ್ರಯಾಣ ಮಾಡುವುದಕ್ಕೆ ಎರಡು ಡೋಸ್ ಲಸಿಕೆ ಅಗತ್ಯ ಎಂದು ಭಾವಿಸಿದ್ದರು. ಆದರೆ ಅವರು ಮಾಸ್ಕ್ ಧರಿಸಿದ್ದರಿಂದ ನರ್ಸ್ ಕೂಡ ಗುರುತಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.