ರಾಜ್ಯ

ಜಾಗರೂಕರಾಗಿರಿ, ಸ್ನೇಹಪರರಾಗಿರಿ: ಪೊಲೀಸರಿಗೆ ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು: ಎಲ್ಲಾ ಪ್ರಕರಣಗಳನ್ನು ಪರಿಣಾಮಕಾರಿ ರೀತಿಯಲ್ಲಿ ತನಿಖೆ ನಡೆಸುವಂತೆ ಹಾಗೂ ಯಾವುದೇ ರೀತಿಯ ಮಾಫಿಯಾದವರ ಜೊತೆಗೆ ಪೊಲೀಸ್ ಅಧಿಕಾರಿಗಳು ಸ್ನೇಹ ಹೊಂದದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪೊಲೀಸರಿಗೆ ತಾಕೀತು ಮಾಡಿದ್ದಾರೆ. 

ಸೋಮವಾರ ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಐಪಿಎಸ್ ಅಧಿಕಾರಿಗಳ ಸಮ್ಮೇಳನದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೊಲೀಸ್ ಠಾಣಾ ಮಟ್ಟದಲ್ಲಿ ಜನ ಸ್ನೇಹಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ಹೆಚ್ಚು ಒತ್ತು ಕೊಡಬೇಕೆಂದು ಹೇಳಿದರು. 

ಬೆಂಗಳೂರು ಹೊರವಲಯದಲ್ಲಿ ಭೂ ವ್ಯವಹಾರಗಳಲ್ಲಿ ಪೊಲೀಸರ ಮಧ್ಯಪ್ರವೇಶದ ಬಗ್ಗೆ ದೂರುಗಳು ಬಂದಿವೆ. ಸಿವಿಲ್ ವಿವಾದಗಳಲ್ಲಿ ಮೂಗು ತೂರಿಸದಂತೆ ಪೊಲೀಸರಿಗೆ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ. 

ಅದೇ ರೀತಿ ಭೂ ವ್ಯವಹಾರದ ಏಜೆಂಟ್ ಗಳು, ನದಿ ಪಾತ್ರದಲ್ಲಿ ಮರಳು ಸಾಗಾಣಿಕೆ ಮಾಡುವವರು ಸೇರಿದಂತೆ ಕ್ರಮಿನಲ್ ಹಿನ್ನಲೆಯುಳ್ಳವರೊಂದಿಗೆ ಪೊಲೀಸರು ಸ್ನೇಹ ಹೊಂದಿರಬಾರದು. ಈ ರೀತಿಯ ಗೆಳೆತನವನ್ನು ಸಹಿಸುವುದಿಲ್ಲ ಎಂದು ಐಪಿಎಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ನೇರವಾಗಿ ಎಚ್ಚರಿಕೆ ಕೊಟ್ಟರು. 

ದೇಶದಲ್ಲೇ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಕರ್ನಾಟಕ ಪೊಲೀಸರು ಮೊದಲ ಸ್ಥಾನದಲ್ಲಿದ್ದು, ಈ ಪರಂಪರೆಯನ್ನು ದಕ್ಷ ಮತ್ತು ಪ್ರಾಮಾಣಿಕ ಸೇವೆಯಿಂದ ಪೊಲೀಸರು ಮುಂದುವರೆಸಿಕೊಂಡು ಹೋಗಬೇಕು. ಜನರ ಸೇವೆ ಮಾಡಲು ಪೊಲೀಸರಿಗೆ ಅಧಿಕಾರವನ್ನು ನೀಡಲಾಗಿದೆ. ಈ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡುವ ಮಹತ್ವದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು. 

SCROLL FOR NEXT