ರಾಜ್ಯ

ಉಗ್ರ ಕಸಬ್ ಗೂ ಗುರುತಿನ ಚೀಟಿ ಇತ್ತು, ಕರ್ನಾಟಕ ಧರ್ಮ ಛತ್ರವಾಗಲು ಬಿಡುವುದಿಲ್ಲ: ಗೃಹ ಸಚಿವ ಅರಗ ಜ್ಞಾನೇಂದ್ರ

Srinivasamurthy VN

ಬೆಂಗಳೂರು: ಕರ್ನಾಟಕ ರಾಜ್ಯವನ್ನು ಯಾವುದೇ ಕಾರಣಕ್ಕೂ ಧರ್ಮಛತ್ರವಾಗಲು ಬಿಡುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ, ಅನಧಿಕೃತ ಬಾಂಗ್ಲಾ, ರೋಹಿಂಗ್ಯಾ ಮುಸಲ್ಮಾರನ ಗುರುತಿಸಲಾಗಿದೆಯಾ? ಕಸ ಆಯುವವರಿಂದ ಹಿಡಿದು ಹೊಟೇಲ್ ಸೇರಿದಂತೆ ಬಹುತೇಕ ಕಡೆ ಬಾಂಗ್ಲಾದ ಕೆಲಸಗಾರರೇ ಇದ್ದಾರೆ. ಬೆಂಗಳೂರು ನಗರದ ಹಲವು ಬಡಾವಣೆಗಳಲ್ಲಿ ರೋಹಿಂಗ್ಯಾ, ಬಾಂಗ್ಲಾ ಮುಸಲ್ಮಾನರು ಇದ್ದಾರೆ ಎನ್ನುವ ವರದಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಅಕ್ರಮ ವಲಸಿಗರು ನಕಲಿ ಮತದಾರರ ಗುರಿತಿನ‌ಚೀಟಿ ಮಾಡಿಕೊಂಡು ಸ್ಥಳೀಯರ ಉದ್ಯೋಗ ಕಸಿಯುತ್ತಿದ್ದಾರೆ, ಉಗ್ರ ಕಸಬ್ ಗೂ ಇಲ್ಲಿನ ಮತದಾರರ ಗುರುತಿನ‌ಚೀಟಿ ಇತ್ತು ಎನ್ನುವುದು ಬಹಿರಂಗವಾಗಿದೆ. ದೇಶದ್ರೋಹಿ ಚಟುವಟಿಕೆ ನಡೆಯುತ್ತಿದ್ದರೂ ಕ್ರಮವಿಲ್ಲ. ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ವಲಸಿಗರಿದ್ದಾರೆ, ಅವರನ್ನು ಹೊರಹಾಕಬೇಕು, ಇಂದು ದೇವಾಲಯ ಒಡೆಯುತ್ತಿದ್ದಾರೆ, ನಮ್ಮ ಮುಂದಿನ ಪೀಳಿಗೆಗೆ ಈ ಅಕ್ರಮ ವಲಸಿಗರಿಂದ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸರ್ಕಾರಕ್ಕೆ ಬದ್ಧತೆ ಇದೆ. ಅಕ್ರಮ ವಲಸಿಗರು ನೆಲೆಸಿದ್ದರೆ ಕಣ್ಗಾವಲು ಇಡಲು‌ ಸೂಚಿಸಲಾಗಿದೆ. ರೋಹಿಂಗ್ಯಾ ಸಮುದಾಯದವರನ್ನು ಹೊರಹಾಕಲು ಕೇಂದ್ರದ ಮಾರ್ಗಸೂಚಿ ಇನ್ನು ಬಂದಿಲ್ಲ. ಅವರೆಲ್ಲಾ ಆರು ಕ್ಯಾಂಪ್‌ಗಳಲ್ಲಿ 190 ಜನ ನೆಲೆಸಿದ್ದಾರೆ. ವಿದೇಶಿಗರ ಚಲನವಲನ ಗಮನಿಸಲು ಸೂಚಿಸಲಾಗಿದೆ. ಆಂತರಿಕ‌ ಭದ್ರತಾ ಅಧಿಕಾರಿಗಳು ವಲಸಿಗರ ವಸತಿ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.

ವಿದೇಶಿಗರಿಂದ ಅಕ್ರಮ‌ ಚಟುವಟಿಕೆ ನಡೆಯಲು ಬಿಡುವುದಿಲ್ಲ. ವೀಸಾ ಮುಗಿದಿದ್ದರೆ ಏನು ಮಾಡಬೇಕು ಎಂದು ಪರಿಶೀಲಿಸಲಾಗುತ್ತಿದೆ. ಸಿವಿಲ್ ಡಿಟೆನ್ಷನ್ ಸೆಂಟರ್ ಇದೆ. ಅಲ್ಲಿ ಆಫ್ರಿಕನ್ ಪ್ರಜೆಗಳನ್ನು ಇರಿಸಿದ್ದೇವೆ. ಅವರ ಬಗ್ಗೆಯೂ ಕಣ್ಗಾವಲು ಇವೆ. ಕೆಲವರ ವಿರುದ್ಧ ಮೊಕದ್ದಮೆ ಇವೆ, ಅವು ಮುಗಿಯದೇ ವಾಪಸ್ ಕಳಿಸಲು ಸಾಧ್ಯವಿಲ್ಲ. ಸರ್ಕಾರ ಎಚ್ಚರಿಕೆ ವಹಿಸಿದೆ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಧರ್ಮಛತ್ರವಾಗಲು ಬಿಡುವುದಿಲ್ಲ ಎಂದರು.

SCROLL FOR NEXT