ಬೆಂಗಳೂರು: ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ಮಾನಪ್ಪ ವಜ್ಜಲ್ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಾಗಿದೆ.
ಆಂಜನೇಯ ವಜ್ಜಲ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಉದ್ಯಮಿ ದೀಪಕ್ ರೈ ಅವರ ಪುತ್ರ ವಿಕ್ರಮ್ ರೈ ಅವರು ದೂರು ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ, ಪಂಚ್ ಮಾಡುವ ಆಯುಧದಿಂದ ವಿಕ್ರಮ್ ರೈ ಮೇಲೆ ಹಲ್ಲೆ ಮಾಡಿದ್ದಾರೆ. ಆಂಜನೇಯ ಹಾಗೂ ಗ್ಯಾಂಗ್ ಮೂರು ಕಾರುಗಳಿಂದ ಪಂಚ್ ಆಯುಧ ಹೊರತೆಗೆದು ಭೀಕರ ಹಲ್ಲೆ ನಡೆಸಿದ್ದಾರೆ. 10 ರಿಂದ 15 ಹುಡುಗರನ್ನ ಕರೆಸಿ ಹಲ್ಲೆ ಮಾಡಿದ್ದಾರೆ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಕಳೆದ ಭಾನುವಾರ ರಾತ್ರಿ ಅಪಾರ್ಟ್ಮೆಂಟ್ನಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ವಿಕ್ರಮ್ ರೈ ಮತ್ತು ಆಂಜನೇಯ ವಜ್ಜಲ್ ನಡುವೆ ಹೊಡೆದಾಟ ನಡೆದಿದೆ. ಈ ಗಲಾಟೆಯಲ್ಲಿ ವಿಕ್ರಮ್ ರೈ ಕಣ್ಣಿನ ಮೇಲ್ಭಾಗಕ್ಕೆ ಗಾಯವಾಗಿದೆ.
ಈ ಪ್ರಕರಣ ಸಂಬಂಧ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಆಂಜನೇಯ ವಜ್ಜಲ್ ಮತ್ತು ವನೀಶ್ ವಜ್ಜಲ್ ಸಹ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಕ್ರಮ್ ರೈ ಸಹ ಠಾಣೆಯಲ್ಲಿ ದೂರು ನೀಡಿದ್ದು, ಈಗ ಶಾಸಕನ ಪುತ್ರನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.