ಬೆಂಗಳೂರು: ರಾಜಧಾನಿ ಬೆಂಗಳೂರಿಗರನ್ನು ಕಳೆದ ರಾತ್ರಿ ಬೆಚ್ಚಿಬೀಳಿಸಿದ ಒಂದೇ ಕುಟುಂಬದ ಐವರ ಆತ್ಮಹತ್ಯೆ ನಂತರ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಇಂದು ಬೆಳಗ್ಗೆ ಶವದ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರಿಸಲಿದ್ದಾರೆ.
ಬೆಂಗಳೂರಿನ ತಿಗಳರಪಾಳ್ಯದ ಬ್ಯಾಡರಹಳ್ಳಿಯ 4ನೇ ಕ್ರಾಸ್ ನಲ್ಲಿರುವ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಇಲ್ಲದ ವೇಳೆ ಅವರ ಪತ್ನಿ 50 ವರ್ಷದ ಭಾರತಿ, 27 ವರ್ಷದ ಮಗ ಮಧು ಸಾಗರ್, ಹೆಣ್ಣುಮಕ್ಕಳಾದ 33 ವರ್ಷದ ಸಿಂಚನಾ ಮತ್ತು 30 ವರ್ಷದ ಸಿಂಧುರಾಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಐದು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದ್ದು ಶವಗಳು ಕೊಳೆತ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದ್ದವು. ಘಟನೆಯಲ್ಲಿ 3 ವರ್ಷದ ಮಗು ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದು 9 ತಿಂಗಳ ಮಗು ಹಸಿವಿನಿಂದ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರು: ಪತ್ರಿಕೆ ಸಂಪಾದಕನ ಕುಟುಂಬದ ಐವರು ಆತ್ಮಹತ್ಯೆಗೆ ಶರಣು; ಪವಾಡ ಸದೃಶ್ಯ ಬದುಕುಳಿದ 3 ವರ್ಷದ ಮಗು!
ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮನೆ ಯಜಮಾನ ಶಂಕರ್ ಇರಲಿಲ್ಲ. ಮೂರು ದಿನಗಳ ಹಿಂದೆ ಫೋನ್ ಮಾಡಿದ್ದ ವೇಳೆ ಮನೆಯವರಿಂದ ಪ್ರತಿಕ್ರಿಯೆ ಬಾರದಿದ್ದಾಗ ಮನೆಯ ಬಳಿ ನಿನ್ನೆ ಬಂದು ಮನೆಬಾಗಿಲಲ್ಲಿ ಕರೆಗಂಟೆ ಒತ್ತಿದ್ದಾರೆ. ಆದರೂ ಯಾವುದೇ ಸುದ್ದಿ, ಪ್ರತಿಕ್ರಿಯೆ ಬರಲಿಲ್ಲ. ಸುತ್ತಮುತ್ತಲಿನವರೂ ಸಂಶಯ ವ್ಯಕ್ತಪಡಿಸಿದ್ದರು. ಕಳೆದ ನಾಲ್ಕೈದು ದಿನಗಳಿಂದ ಮನೆಯವರನ್ನು ಹೊರಗೆ ಕಾಣಿಸಿಲ್ಲ ಎಂದಿದ್ದಾರೆ.
ಕೊನೆಗೆ ಶಂಕರ್ ಪೊಲೀಸರಿಗೆ ವಿಷಯ ತಲುಪಿಸಿದರು. ಪೊಲೀಸರು ಬಂದು ಮನೆ ಬಾಗಿಲು ಒಡೆದು ನೋಡಿದಾಗ ಭೀಕರ ಸ್ಥಿತಿ ಕಂಡುಬಂತು. 5 ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದವು. 3 ವರ್ಷದ ಮಗು ಶವಗಳ ನಡುವೆ ನಾಲ್ಕೈದು ದಿನ ನರಳುತ್ತಾ ಕುಳಿತಿತ್ತು.
ಇದನ್ನೂ ಓದಿ: ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ; ಆತ್ಮಹತ್ಯೆಯೋ, ಕೊಲೆಯೋ ಎನ್ನುವ ಶಂಕೆ?
ಶವಗಳ ಅಂತ್ಯಕ್ರಿಯೆ ಮಂಡ್ಯ ಜಿಲ್ಲೆಯ ಹಲ್ಲೆಗೆರೆಯಲ್ಲಿ ನೆರವೇರುವ ಸಾಧ್ಯತೆಯಿದೆ.
ಕೌಟುಂಬಿಕ ಕಲಹ ಕಾರಣ?: ಮೊನ್ನೆ ಸೆಪ್ಟೆಂಬರ್ 12ರಂದು ಮನೆಯ ಸದಸ್ಯರ ಜೊತೆ ಜಗಳ ಮಾಡಿಕೊಂಡು ಹೊರಹೋಗಿದ್ದ ಶಂಕರ್ ಮನೆಗೆ ವಾಪಸ್ಸಾಗಿರಲಿಲ್ಲ. ಮನೆಯಲ್ಲಿ ನಿತ್ಯ ಜಗಳ, ಮನಸ್ತಾಪ ನಡೆಯುತ್ತಿತ್ತು. ಇದರಿಂದ ನೊಂದು ಶಂಕರ್ ಪತ್ನಿ, ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಶಂಕರ್ ಅವರು ಸ್ಥಳೀಯ ಶಾಸಕ ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ.