ರಾಜ್ಯ

ಮೈಸೂರು ದಸರಾಕ್ಕೆ ಮುನ್ನುಡಿ, ಕಾಡಿನಿಂದ ಅರಮನೆಯತ್ತ ಹೊರಟ ಗಜಪಡೆ, ಪೂಜೆ ಸಲ್ಲಿಕೆ

Sumana Upadhyaya

ಮೈಸೂರು: ವಿಶ್ವವಿಖ್ಯಾತ ದಸರಾ ಹಬ್ಬಕ್ಕೆ ಇನ್ನೆರಡು ತಿಂಗಳು ಬಾಕಿಯಿದೆ. ಅದಕ್ಕೆ ಸಿದ್ಧತೆ ಈಗಲೇ ಆರಂಭವಾಗಿದೆ. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗಿದ್ದ ಮೈಸೂರು ದಸರಾವನ್ನು(Mysuru Dasara) ಈ ವರ್ಷ ಅದ್ದೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಕೂಡ ನಿರ್ಧರಿಸಿದೆ.

ಮೈಸೂರು ದಸರಾ ಆಕರ್ಷಣೆ ಜಂಬೂಸವಾರಿ, ಮೆರವಣಿಗೆ ಗಜಪಡೆ ಸಾಗುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ. ನಾಡದೇವತೆ ಚಾಮುಂಡಿ ದೇವಿಯನ್ನು ಹೊತ್ತು ಮೆರವಣಿಗೆ ಸಾಗುವ ಗಜಪಡೆ ಕಾಡಿನಿಂದ ನಾಡಿಗೆ ಬರುವುದು ಎಂದರೆ ದಸರಾಕ್ಕೆ ಮುನ್ನುಡಿಯಿಟ್ಟಂತೆ. 

ನಾಡಹಬ್ಬ ಮೈಸೂರು ದಸರಾ 2022ಕ್ಕೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಇಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಜಂಟಿಯಾಗಿ ಚಾಲನೆ ನೀಡಿದರು. 

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಬೆಳಗ್ಗೆ 9.01ರಿಂದ 9.35ರ ಕನ್ಯಾಲಗ್ನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಅಭಿಮನ್ಯು, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಚೈತ್ರಾ, ಗೋಪಾಲಸ್ವಾಮಿ, ಕಾವೇರಿ, ಲಕ್ಷ್ಮೀ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಫಲತಾಂಬೂಲ ನೀಡಲಾಯಿತು.

ಕಲಾತಂಡಗಳು, ಮಂಗಳವಾದ್ಯಗಳ ಜೊತೆಗೆ ವರುಣನ ಸಿಂಚನದ ನಡುವೆ ಗಜಪಡೆ ಕಾಡಿನಿಂದ ನಾಡಿನತ್ತ ಹೆಜ್ಜೆಹಾಕಿದವು.
ಮೊದಲ ಹಂತದಲ್ಲಿ 9 ಆನೆಗಳು ಇಂದು ಆರಂಭವಾಗುವ ಗಜಪಯಣದಲ್ಲಿ ಮೈಸೂರಿಗೆ ಆಗಮಿಸಿದವು ಎಂದು  ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.

ಸಚಿವ ಉಮೇಶ್ ಕತ್ತಿ ಸೇರಿ ಹಲವು ಗಣ್ಯರಿಂದ ಪುಷ್ಪಾರ್ಚನೆ ಸಲ್ಲಿಸಿ, ಗಜಪಡೆಯ ಮೊದಲ ತಂಡಕ್ಕೆ ಪೂಜೆ ನೆರವೇರಿಸಿ ಅಧಿಕೃತವಾಗಿ ಚಾಲನೆ ನೀಡಿದರು. ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
ಗಜಪಡೆಗಳಿಗೆ ಪೂಜೆ ಮಾಡುವುದು ಮೈಸೂರು ದಸರ ಸಂಪ್ರದಾಯ. ಇನ್ನೊಂದೆಡೆ ನಾಡಹಬ್ಬ ದಸರಾದ ಕಾರ್ಯಕ್ರಮಗಳಿಗೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 

ಶೂ ಧರಿಸಿದ ಸಚಿವ ಉಮೇಶ್ ಕತ್ತಿ: ಹಿಂದೂ ಸಂಪ್ರದಾಯದಲ್ಲಿ ದೇವರಿಗೆ, ದೇವರ ಸಮನಾದ ಗಜಪಡೆಗೆ ಪೂಜೆ ಸಲ್ಲಿಸುವಾಗ ಶೂ, ಚಪ್ಪಲಿ ಧರಿಸುವಂತಿಲ್ಲ. ಆದರೆ ಇಂದು ಗಜಪಡೆಗಳಿಗೆ ಪೂಜೆ ಸಲ್ಲಿಸುವಾಗ ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಶೂ ಧರಿಸಿದ್ದು ಟೀಕೆ ವ್ಯಕ್ತವಾಗಿದೆ. ಉಳಿದವರೆಲ್ಲರೂ ಬರಿಗಾಲಿನಲ್ಲಿ ಇದ್ದರೆ ಸಚಿವ ಉಮೇಶ್ ಕತ್ತಿ ಮಾತ್ರ ಶೂ ಧರಿಸಿದ್ದರು.

SCROLL FOR NEXT