ರಾಜ್ಯ

ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಗೆ ಕೆಎಂಎಫ್ ನೌಕರರು: ಹೈಕೋರ್ಟ್ ಮಹತ್ವದ ಆದೇಶ

Srinivasamurthy VN

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನೌಕರರೂ ಕೂಡ ಸಾರ್ವಜನಿಕ ಸೇವಕರಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದೆ.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನ್ನ ಗೊತ್ತಿರುವ ಆದಾಯದ ಮೂಲಗಳನ್ನು ಮೀರಿ ಸಂಪತ್ತು ಗಳಿಸಿದ ಆರೋಪದ ಮೇಲೆ ದಾಖಲಿಸಿದ ಪ್ರಕರಣವನ್ನು ಪ್ರಶ್ನಿಸಿ ಕೆಎಂಎಫ್ ಘಟಕದ ನಂದಿನಿ ಹಾಲು ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕ ವಿ ಕೃಷ್ಣಾ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಎಸಿಬಿ ಅವರು ನಂದಿನಿ ಮಿಲ್ಕ್ ಪ್ರಾಡಕ್ಟ್ಸ್‌ನ ಜನರಲ್ ಮ್ಯಾನೇಜರ್ ಆಗಿದ್ದಾಗ ನವೆಂಬರ್ 23, 2021 ರಂದು ಕಾಯಿದೆಯ 13(2) ಸೆಕ್ಷನ್ 13(1)(ಬಿ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಿದ್ದರು. ಅವರ ಮನೆ ಮತ್ತು ಆಸ್ತಿಯನ್ನು ಶೋಧಿಸಲಾಗಿದ್ದು,  ಈ ಕುರಿತತನಿಖೆ ಪ್ರಗತಿಯಲ್ಲಿದೆ. ಏತನ್ಮಧ್ಯೆ, ಕೆಎಂಎಫ್‌ನ ನೌಕರರು ಕಾಯಿದೆಯಡಿ ವ್ಯಾಖ್ಯಾನಿಸಿದಂತೆ ಸಾರ್ವಜನಿಕ ಸೇವಕರಲ್ಲ ಮತ್ತು ಎಸಿಬಿ ದಾಖಲಿಸಿದ ಅಪರಾಧವು ಅದರ ವ್ಯಾಪ್ತಿಯನ್ನು ಮೀರಿದೆ ಎಂದು ರೆಡ್ಡಿ ನ್ಯಾಯಾಲಯದ ಮೆಟ್ಟಿಲೇರಿದರು.

ಏನಿದು ಪ್ರಕರಣ?
2021 ನವೆಂಬರ್ 20 ರಂದು ವಿ ಕೃಷ್ಣಾ ರೆಡ್ಡಿ ಅವರ ವಿರುದ್ಧ ಎಸಿಬಿ (ACB) ದಾಳಿ ನಡೆಸಿ ಕೇಸ್ ದಾಖಲಿಸಿತ್ತು. ಆದಾಯ ಮೀರಿ (Corruption) ಶೇ. 107 % ಆಸ್ತಿ ಹೊಂದಿದ ಆರೋಪ ಹೊರಿಸಲಾಗಿತ್ತು. ಆದರೆ ಪ್ರಕರಣ ರದ್ದು ಕೋರಿ ವಿ. ಕೃಷ್ಣಾರೆಡ್ಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕೆಎಂಎಫ್ ಸಿಬ್ಬಂದಿ ಸರ್ಕಾರಿ ನೌಕರರಲ್ಲವೆಂದು ವಾದಿಸಿದ್ದರು. ಹೀಗಾಗಿ ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲವೆಂದು ವಾದಿಸಿದ್ದರು. ಆದರೆ ಅರ್ಜಿದಾರರ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.

ಕೆಎಂಎಫ್ ನೌಕರ ಕೂಡಾ ಭ್ರಷ್ಟಾಚಾರ ತಡೆ ಕಾಯ್ದೆಗೆ ಒಳಪಡುತ್ತಾರೆ. ಅರ್ಜಿದಾರನ ಮೇಲೆ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪವಿದೆ. ಭ್ರಷ್ಟಾಚಾರ ದೇಶದ ಜನಜೀವನವನ್ನು ಆವರಿಸಿದೆ. ಸಂವಿಧಾನದ ಆಡಳಿತಕ್ಕೆ ಭ್ರಷ್ಟಾಚಾರ ಅಪಾಯಕಾರಿ. ಬೇರೆ ಬೇರೆ ಸ್ವರೂಪಗಳಲ್ಲಿ ಲಂಚಗುಳಿತನ ವ್ಯಾಪಿಸಿದೆ. ಉತ್ತಮ ಆಡಳಿತಕ್ಕಾಗಿ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ಅನಿವಾರ್ಯ ಎಂದು ನ್ಯಾ. ಎಂ. ನಾಗಪ್ರಸನ್ನ ಅವರ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.
 

SCROLL FOR NEXT