ರಾಜ್ಯ

ಸಾಮೂಹಿಕ ಕೊಲೆ ಮಾಡಿದವನಿಗೆ ಆಗಸ್ಟ್ 15ರಂದು ಬಿಡುಗಡೆ ಭಾಗ್ಯ: ಕುಟುಂಬಸ್ಥರ ಆಕ್ಷೇಪ

Sumana Upadhyaya

ಮಂಗಳೂರು: ಅದು 1994ರ ಫೆಬ್ರವರಿ 23ನೇ ತಾರೀಕು. ಮಂಗಳೂರು ಸಮೀಪ ವಾಮಂಜೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ ಕರಾವಳಿಯನ್ನು ಬೆಚ್ಚಿಬೀಳಿಸಿತ್ತು. ಪ್ರಕರಣದ ಒಬ್ಬನೇ ಒಬ್ಬ ಅಪರಾಧಿ ಬಳ್ಳಾರಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಪಡೆಯುತ್ತಿದ್ದ ಪ್ರವೀಣ್ ಕುಮಾರ್ ಎಂಬಾತನಿಗೆ ಇದೀಗ ಸನ್ನಡತೆ ಆಧಾರದ ಮೇಲೆ ಆಗಸ್ಟ್ 15ರ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಜೈಲಿನಿಂದ ಬಿಡುಗಡೆ ಭಾಗ್ಯ ಸಿಗುತ್ತಿದೆ.

ಆದರೆ ಇಲ್ಲಿ ಅಪರಾಧಿಯನ್ನು ಬಿಡುಗಡೆ ಮಾಡುತ್ತಿರುವುದು ಕೊಲೆಗೀಡಾದವರ ಕುಟುಂಬಸ್ಥರಿಗೆ ಸಿಟ್ಟು, ಆಕ್ರೋಶ ಮತ್ತು ಭಯ ಹುಟ್ಟಿಸಿರುವುದು ಮಾತ್ರವಲ್ಲದೆ ಪ್ರವೀಣ್ ಕುಮಾರ್ ನ ಕುಟುಂಬಕ್ಕೂ ಅಷ್ಟೇ ಆತಂಕವನ್ನು ತಂದೊಡ್ಡಿದೆ. ಇದಕ್ಕಾಗಿ ಪ್ರವೀಣ್ ನ ಪತ್ನಿ, ಒಡಹುಟ್ಟಿದವರು ಒಟ್ಟಾಗಿ ನಿನ್ನೆ ಮಂಗಳೂರು ಸಿಟಿ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರಿಗೆ ಮನವಿ ಸಲ್ಲಿಸಿ ಅಪರಾಧಿ ಪ್ರವೀಣ್ ನನ್ನು ಬಿಡುಗಡೆ ಮಾಡದಂತೆ ಒತ್ತಾಯಿಸಿದ್ದಾರೆ. ಅಲ್ಲದೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಹ ಪತ್ರ ಬರೆದಿದ್ದಾರೆ.

59 ವರ್ಷದ ವೃತ್ತಿಯಲ್ಲಿ ದರ್ಜಿಯಾಗಿರುವ ಪ್ರವೀಣ್ ಉಪ್ಪಿನಂಗಡಿ ಸಮೀಪ ಹಿರಿಯಡ್ಕದವರು. ಆತ ವಾಮಂಜೂರಿನಲ್ಲಿ ತನ್ನ ಅತ್ತೆ ಅಪ್ಪಿ ಶೆರಿಗತಿಯವರ ಜೊತೆ ವಾಸಿಸುತ್ತಿದ್ದನು. ಮನೆಯಲ್ಲಿರುವ ಸಂಪತ್ತಿನ ಆಸೆಯಿಂದ ತನಗೆ ಆಸರೆಕೊಟ್ಟ ಅತ್ತೆ ಅಪ್ಪಿ, ಅವರ ಮಗಳು ಶಕುಂತಲಾ, ಮಗ ಗೋವಿಂದ ಮತ್ತು ಮೊಮ್ಮಗಳು 9 ವರ್ಷದ ದೀಪಕರನ್ನು ಕೊಲೆ ಮಾಡಿದ್ದನು. ಜೂಜಾಟದಲ್ಲಿ ತೊಡಗಿದ್ದ ಪ್ರವೀಣ್ ಎಲ್ಲಾ ಕಳೆದುಕೊಂಡು ಸಾಲಗಾರನಾಗಿದ್ದ.

ಪ್ರವೀಣ್ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಬಹಳ ಅಪಾಯಕಾರಿಯಾಗಿದ್ದು, ಒಬ್ಬ ಭೀಕರ ಕೊಲೆಗಾರ, ತಾನು ಮಾಡಿದ ಕೃತ್ಯದ ಬಗ್ಗೆ ಪಶ್ಚಾತಾಪಪಡುವವನಲ್ಲ. ಆತನನ್ನ ಆ ಸಮಯದಲ್ಲಿ ಬಂಧಿಸಿದ ತಕ್ಷಣ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಗೋವಾದಲ್ಲಿ 4 ವರ್ಷಗಳ ಕಾಲ ಅಡಗಿ ಕುಳಿತಿದ್ದ. ಅಲ್ಲಿ ಮತ್ತೊಂದು ಮದುವೆಯಾಗಿ ಮಗು ಕೂಡ ಮಾಡಿಕೊಂಡಿದ್ದ ಎಂದು ಅಪ್ಪಿ ಶೆರಿಗತಿಯವರ ಮಗ ಸೀತಾರಾಮ ಗುರ್ಪುರ್ ಹೇಳುತ್ತಾರೆ.

ಪ್ರವೀಣನಿಗೆ ತನ್ನ ಕೃತ್ಯದ ಬಗ್ಗೆ ಪಶ್ಚಾತಾಪ ಇಲ್ಲದಿರುವುದರಿಂದ ಆತ ಬಿಡುಗಡೆಯಾಗಿ ಬಂದರೆ ತಮ್ಮ ಸುರಕ್ಷತೆ ಬಗ್ಗೆ ಆತಂಕವಾಗುತ್ತದೆ ಎಂದು ಸೀತಾರಾಮ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಗೆ ಪತ್ರ ಬರೆದಿದ್ದಾರೆ. ಪ್ರವೀಣ್ ಬಿಡುಗಡೆ ಬಗ್ಗೆ ಆಯುಕ್ತರ ಕಾರ್ಯಾಲಯಕ್ಕೆ ಯಾವುದೇ ಮಾಹಿತಿ ಬಂದಿಲ್ಲ ಎನ್ನುತ್ತಾರೆ.

SCROLL FOR NEXT