ಬೆಂಗಳೂರು: ಜಿಗಣಿ ಪೊಲೀಸ್ ಠಾಣೆಯ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ 38 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಪತ್ನಿ ಕವಿತಾ ಜತೆಗಿನ ಜಗಳದಿಂದ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದ ಚಿಕ್ಕಮಗಳೂರಿನ ರತೇಶ್ ಎಂಬಾತ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಆತನನ್ನು ರಕ್ಷಿಸಿದ್ದ ಪೊಲೀಸರು ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಶೇಕಡ 80ಕ್ಕೂ ಹೆಚ್ಚು ಸುಟ್ಟಗಾಯಗಳಾಗಿದ್ದರಿಂದ ಆತ ಬದುಕಲು ಸಾಧ್ಯವಾಗಲಿಲ್ಲ.
ಈ ಜೋಡಿ ಸುಮಾರು 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ ಐದು ವರ್ಷಗಳಿಂದ ಕ್ಷುಲ್ಲಕ ವಿಚಾರಗಳಿಗೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಗುರುವಾರ ರತೇಶ್ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪತ್ನಿಯೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ.
ಇದರಿಂದ ಬೇಸರಗೊಂಡ ಕವಿತಾ ತನ್ನ ತಂದೆ ಮಹದೇವ್ಗೆ ಕರೆ ಮಾಡಿ ಪತಿಯ ವಿರುದ್ಧ ದೂರು ನೀಡಲು ಜಿಗಣಿ ಠಾಣೆಗೆ ತೆರಳಿದ್ದರು. ರತೇಶ್ ಸಹ ತನ್ನ ಹೆಂಡತಿಯನ್ನು ಹಿಂಬಾಲಿಸಿಕೊಂಡು ಠಾಣೆಗೆ ಬಂದಿದ್ದು ಪೊಲೀಸ್ ಠಾಣೆ ಎದುರು ಬೈಕ್ ನಿಲ್ಲಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು.