ರಾಜ್ಯ

ರಾಮನಗರ: ಮಳೆ ಆರ್ಭಟಕ್ಕೆ ಆಲದ ಮರ ಉರುಳಿ ಬಿದ್ದು ವ್ಯಕ್ತಿ ಸಾವು

Nagaraja AB

ರಾಮನಗರ: ರಾಮನಗರ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.  ಜಿಲ್ಲೆಯಲ್ಲಿ ಎರಡು ದಶಕಗಳಲ್ಲಿಯೇ  ಈ ಬಾರಿ ಅತ್ಯಧಿಕ ಮಳೆಯಾಗಿದ್ದು, ಮಳೆ ನಾನಾ ಅವಾಂತರಗಳನ್ನು ಸೃಷ್ಟಿಸುತ್ತಿದೆ.

ಮಳೆ ಆರ್ಭಟಕ್ಕೆ ಇಂದು ಬಿಡದಿ ಬಳಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ. ಆಲದ ಮರ ಉರುಳಿ ಬಿದ್ದು ತೊರೆದೊಡ್ಡಿ ಗ್ರಾಮದ ಬೋರೇಗೌಡ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಜಿಲ್ಲೆಯಲ್ಲಿ ಮಳೆ ಸಂಬಂಧಿತ ಅನಾಹುತಗಳ ಸಂಖ್ಯೆ ಮುಂದುವರೆದಿದ್ದು, ಚನ್ನಪಟ್ಟಣದ ಬಳಿ ಹಸುವೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ. ಇನ್ನೂ ಬೆಂಗಳೂರು- ಮೈಸೂರು ರಸ್ತೆ ಜಲಾವೃತಗೊಂಡು, ವಾಹನಗಳು ನೀರಿನಲ್ಲಿ ಸಿಲುಕಿವೆ.

ಅವುಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ರಾಮನಗರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಕೂಡಾ ತೆರಳುವ ಸಾಧ್ಯತೆಯಿರುವುದಾಗಿ ಮೂಲಗಳು ತಿಳಿಸಿವೆ.

SCROLL FOR NEXT