ವಿಜಯಪುರ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ವಿರುದ್ಧ ದಾಂಧಲೆ ಆರೋಪ ಕೇಳಿಬಂದಿದೆ. ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್ ಮಾಲೀಕ ಮಲ್ಲಿಕಾರ್ಜುನ ಹಾಗೂ ಕೆಲಸಗಾರರ ಮೇಲೆ ರಾಜೇಶ್ವರಿ ಗಾಯಕ್ವಾಡ್ ಹಲ್ಲೆ ಮಾಡಿರುವ ಆರೋಪ ಇದಾಗಿದೆ. ಕೆಲವೊಂದು ಕಾಸ್ಮೆಟಿಕ್ ಖರೀದಿಗೆ ಬುಧವಾರ ಸಂಜೆ ಮಾರ್ಕೆಟ್ ಗೆ ತೆರಳಿದಾಗ ಈ ಘಟನೆ ನಡೆದಿದೆ.
ಕಾಸ್ಮೆಟಿಕ್ ಬಾಟಲ್ಗಳನ್ನು ತೆರೆದು ನೋಡುತ್ತಿದ್ದ ರಾಜೇಶ್ವರಿ ಅವರಿಗೆ ಅಲ್ಲಿನ ಮಹಿಳಾ ಕೆಲಸಗಾರರು ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಜಾರಿನ ಮಾಲೀಕ ಮಲ್ಲಿಕಾರ್ಜುನ ಕಾಸ್ಮೆಟಿಕ್ ಬಾಟಲ್ಗಳನ್ನು ಓಪನ್ ಮಾಡದಂತೆ ರಾಜೇಶ್ವರಿ ಅವರಿಗೆ ಹೇಳಿದ್ದಾರೆ. ಇದರಿಂದ ರಾಜೇಶ್ವರಿ ಬೆಂಬಲಿಗರು ಹಾಗೂ ಬಜಾರಿನ ಮಾಲೀಕರು, ಕೆಲಸಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದು ಗಲಾಟೆ ನಡೆದಿದೆ ಎನ್ನಲಾಗಿದೆ. ಹಲ್ಲೆಯ ವಿಡಿಯೋ ಸೂಪರ್ ಬಜಾರಿನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ. ಆದರೆ ಘಟನೆ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಉಜಮದಿ ಸೂಪರ್ ಬಜಾರಿನ ಕೆಲಸಗಾರರೇ ನನ್ನ ಜೊತೆಗೆ ವಾಗ್ವಾದ ನಡೆಸಿ ಅನುಚಿತವಾಗಿ ವರ್ತನೆ ಮಾಡಿದ್ದಾರೆಂದು ರಾಜೇಶ್ವರಿ ಗಾಯಕ್ವಾಡ್ ಆರೋಪಿಸಿದ್ದಾರೆ.