ರಾಜ್ಯ

ಮೈಸೂರು ತಯಾರಿಕಾ ಘಟಕ ವಿಸ್ತರಣೆಗೆ ಎಬಿ-ಇನ್ಬೆವ್ ಆಸಕ್ತಿ: ಸುಮಾರು 500 ಕೋಟಿ ರೂ. ಹೂಡಿಕೆಗೆ ಮುಂದಾದ ಕಂಪೆನಿ

Srinivas Rao BV

ಬೆಂಗಳೂರು: ಬಿಯರ್ ಮತ್ತು ಇತರ ಪಾನೀಯ ತಯಾರಿಕಾ ಕಂಪೆನಿ ಎಬಿ-ಇನ್ಬೆವ್ ನ ಅಧ್ಯಕ್ಷ ಹಾಗೂ ಸಿಇಓ (ಎಪಿಎಸಿ) ಜಾನ್ ಕ್ರಾಪ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಇನ್ನಷ್ಟು ಹೂಡಿಕೆ ಮಾಡುವ ಉತ್ಸುಕತೆ ತೋರಿದರು.


ಎಬಿ-ಇನ್ಬೆವ್ನ ತಯಾರಿಕಾ ಘಟಕ ಈಗಾಗಲೇ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯು ಸುಮಾರು 500 ಕೋಟಿ ರೂ. ಹೂಡಿಕೆಯೊಂದಿಗೆ ಈ ಘಟಕವನ್ನು ವಿಸ್ತರಣೆ ಮಾಡಲು ಮುಂದಾಗಿದೆ. ರಾಜ್ಯದ ಕೈಗಾರಿಕಾ ಸೌಲಭ್ಯಗಳು ಉತ್ತಮವಾಗಿದ್ದು, ಅತ್ಯುತ್ತಮ ಅಬಕಾರಿ ನೀತಿ ಯನ್ನು ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ತಮ್ಮ ಕಂಪೆನಿಯು ಇನ್ನಷ್ಟು ಹೂಡಿಕೆಯನ್ನು ರಾಜ್ಯದಲ್ಲಿ ಮಾಡಲು ಉತ್ಸುಕವಾಗಿದೆ ಎಂದು ತಿಳಿಸಿದರು. 


ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು. ಎಬಿ-ಇನ್ಬೆವ್ ವಿಶ್ವದ ಫಾರ್ಚೂನ್ 500 ಕಂಪೆನಿಗಳಲ್ಲಿ ಒಂದಾಗಿದ್ದು, 150 ದೇಶಗಳಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ. ಭಾರತದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದೆ.  ಮೈಸೂರು ಘಟಕದಲ್ಲಿ ಸುಮಾರು 2000 ಉದ್ಯೋಗಿಗಳಿದ್ದು, ಶೇ. 79 ರಷ್ಟು ಕಾರ್ಯಾಚರಣೆಯನ್ನು ನವೀಕರಿಸಬಹುದಾದ ಇಂಧನ ಬಳಕೆಯ ಮೂಲಕ ಮಾಡುತ್ತಿದೆ.

ಈ ಬ್ರೂವರಿಯ ವಿಸ್ತರಣೆಯಿಂದ ರಾಜ್ಯದ ಬೊಕ್ಕಸಕ್ಕೆ 200-300 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗಲಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚಿನ ಉದ್ಯೋಗ ಸೃಜನೆಯಾಗಲಿದೆ.

ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಮುಖ್ಯಮಂತ್ರಿಯವರ ಕಾರ್ಯದರ್ಶಿಗಳಾದ ಎಂ.ಎಸ್. ಶ್ರೀಕರ್ ಮತ್ತು ಜಯರಾಂ ರಾಯಪುರ, ಎಬಿ-ಇನ್ಬೆವ್ ಇಂಡಿಯಾ ಮತ್ತು ಸೌತ್ ಈಸ್ಟ್ ಏಷ್ಯಾದ ಅಧ್ಯಕ್ಷ ಕಾರ್ತಿಕೇಯ ಶರ್ಮಾ, ಚೀಫ್ ಲೀಗಲ್ ಅಂಡ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ಕ್ರೆಗ್ ಕೇಟರ್ ಬರ್ಗ್, ಉಪಾಧ್ಯಕ್ಷೆ ಅನಸೂಯಾ ರೇ, ಪ್ರಾದೇಶಿಕ ನಿರ್ದೇಶಕ ವಿನೋದ್ ಬಾಬು ಮೊದಲಾದವರು ಉಪಸ್ಥಿತರಿದ್ದರು.

SCROLL FOR NEXT